ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಜಿ.ಟಿ.ದೇವೇಗೌಡ
ಮೈಸೂರು, ಆ.4: ಅಚ್ಚರಿಯ ಬೆಳವಣಿಗೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ನನ್ನ ಕೊನೆ ಚುನಾವಣೆ, ನನಗೆ ಚುನಾವಣೆ ಸಾಕಾಗಿದೆ. ಹಾಗಾಗಿ ಚುನಾವಣಾ ರಾಜಕೀಯದಿಂದ ದೂರ ಸರಿಯುತ್ತೇನೆ ಎಂದು ಹೇಳಿದರು.
ನಾನು ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ದೇವೇಗೌಡ ರನ್ನು ದೇವರಂತೆ ಭಾವಿಸಿ ಅವರು ಹೇಳಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ನನ್ನ ಮಗ ಹರೀಶ್ ಗೌಡನಿಗೆ ಮುಂದಿನ ಬಾರಿ ಟಿಕೆಟ್ ಕೊಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಇಲ್ಲದಿದ್ದರೆ ಎಂಎಲ್ ಸಿ ಮಾಡುವುದಾಗಿ ಹೇಳಿದ್ದರು. ಆದರೆ ಅದ್ಯಾವುದರಾ ಪ್ರಸ್ತಾಪವೂ ಇಲ್ಲ. ನಾನು ಸಾಕಷ್ಟು ನೊಂದಿದ್ದೇನೆ ಎಂದರು.
ನಾನು ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿಯಾಗಲಿ ಅಥವಾ ಸಿದ್ದರಾಮಯ್ಯ ಆಗಲಿ ಯಾರಿಂದಲೂ ಸಹಾಯ ಪಡೆದಿಲ್ಲ, ನಾನು ನನ್ನ ಸ್ವಂತ ಹಣದಲ್ಲಿ ಚುನಾವಣೆ ಎದುರಿಸಿದ್ದೇನೆ ಎಂದು ಹೇಳಿದರು.
ನನಗೆ ಇಷ್ಟವಿಲ್ಲದ ಖಾತೆಯನ್ನು ನೀಡಿದರು. ಉನ್ನತ ಶಿಕ್ಷಣ ಖಾತೆಯನ್ನು ನೀಡಿದರು. ಬೇಡ ಎಂದು ಒಂದು ತಿಂಗಳು ಕಾದೆ. ಆದರೂ ನನಗೆ ಬೇಕಾದ ಖಾತೆಯನ್ನು ನೀಡಲಿಲ್ಲ ಎಂದು ಜೆಡಿಎಸ್ ಪಕ್ಷದ ಮೇಲಿನ ಅಸಮಧಾನವನ್ನು ಹೊರಹಾಕಿದರು.