‘ಇಂದಿರಾ ಕ್ಯಾಂಟೀನ್’ ಹೆಸರು ಬದಲಾಯಿಸಿದರೆ ಉಗ್ರ ಹೋರಾಟ: ದಿನೇಶ್ ಗುಂಡೂರಾವ್ ಎಚ್ಚರಿಕೆ
ಬೆಂಗಳೂರು, ಆ. 5: ‘ಇಂದಿರಾ ಕ್ಯಾಂಟೀನ್’ ಹೆಸರನ್ನು ಅನ್ನಪೂರ್ಣ ಕ್ಯಾಂಟಿನ್ ಎಂದು ಬದಲಾವಣೆ ಮಾಡಲು ಬಿಜೆಪಿ ಸರಕಾರ ಮುಂದಾದರೆ ಅದರ ವಿರುದ್ಧ ಹೋರಾಟ ರೂಪಿಸಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರ ಸ್ವೀಕಾರ ಮಾಡಿದ ದಿನವೇ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಈಗಾಗಲೇ ಬಹಳ ಜನಪ್ರಿಯವಾಗಿರುವ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಸರಿಯಲ್ಲ ಎಂದು ಆಕ್ಷೇಪಿಸಿದರು.
ಎಲ್ಲ ಕ್ಯಾಂಟೀನ್ಗಳಲ್ಲಿಯೂ ಇಂದಿರಾಗಾಂಧಿ ಅವರ ಭಾವಚಿತ್ರವೂ ಇದೆ. ಬಿಜೆಪಿಯ ಒಬ್ಬ ಮುಖಂಡನ ಮಾತು ಕೇಳಿ ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ದಿನೇಶ್ ಗುಂಡೂರಾವ್ ನುಡಿದರು.
ಒಂದು ವೇಳೆ ಬಿಜೆಪಿ ಸರಕಾರ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಿದರೆ ಪಕ್ಷ ಉಗ್ರ ಸ್ವರೂಪದ ಹೋರಾಟ ರೂಪಿಸಲಿದೆ. ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಬಾರದು ಎಂದು ಅವರು ಆಗ್ರಹಿಸಿದರು.