ಶಿವಮೊಗ್ಗ ಜಿಲ್ಲೆಯಾದ್ಯಂತ ಧಾರಾಕಾರ ಮಳೆ: ನದಿಗಳ ಹರಿವಿನಲ್ಲಿ ಏರಿಕೆ
ಶಿವಮೊಗ್ಗ, ಆ. 5: ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಸೋಮವಾರ ಕೂಡ ಪಶ್ಚಿಮಘಟ್ಟ ಪ್ರದೇಶ ಸೇರಿದಂತೆ ಹಲವೆಡೆ ಧಾರಾಕಾರ ವರ್ಷಧಾರೆ ಮುಂದುವರೆದಿದೆ. ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಏರಿಕೆ ಕ್ರಮೇಣ ಏರಿಕೆ ಕಂಡುಬರುತ್ತಿದ್ದು, ಹೊಸನಗರದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿಯಲ್ಲಿ 112 ಮಿಲಿ ಮೀಟರ್ (ಮಿ.ಮೀ.), ಯಡೂರು 108 ಮಿ.ಮೀ., ಹುಲಿಕಲ್ 126 ಮಿ.ಮೀ., ಮಾಸ್ತಿಕಟ್ಟೆಯಲ್ಲಿ 122 ಮಿ.ಮೀ., ಚಕ್ರಾದಲ್ಲಿ 89 ಮಿ.ಮೀ. ಹಾಗೂ ಸಾವೇಹಕ್ಲುವಿನಲ್ಲಿ 99 ಮಿ.ಮೀ. ಮಳೆಯಾಗಿದೆ.
ಉಳಿದಂತೆ ಹೊಸನಗರದಲ್ಲಿ 138.20 ಮಿ.ಮೀ., ಶಿವಮೊಗ್ಗದಲ್ಲಿ 12.60 ಮಿ.ಮೀ., ಭದ್ರಾವತಿಯಲ್ಲಿ 15.60 ಮಿ.ಮೀ., ತೀರ್ಥಹಳ್ಳಿಯಲ್ಲಿ 69.60 ಮಿ.ಮೀ., ಸಾಗರದಲ್ಲಿ 56 ಮಿ.ಮೀ., ಸೊರಬದಲ್ಲಿ 55.10 ಮಿ.ಮೀ. ಹಾಗೂ ಶಿಕಾರಿಪುರದಲ್ಲಿ 8 ಮಿ.ಮೀ. ಮಳೆಯಾಗಿದೆ.
ಡ್ಯಾಂಗಳ ವಿವರ: ಜಲಾನಯನ ವ್ಯಾಪ್ತಿಯ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯದ ಒಳಹರಿವಿನಲ್ಲಿ ಏರಿಕೆ ಕಂಡುಬಂದಿದ್ದು, ಸೋಮವಾರದ ಬೆಳಗ್ಗಿನ ಮಾಹಿತಿಯಂತೆ 52,423 ಕ್ಯೂಸೆಕ್ ಒಳಹರಿವಿತ್ತು.
ಡ್ಯಾಂನ ನೀರಿನ ಮಟ್ಟ 1785.35 (ಗರಿಷ್ಠ ಮಟ್ಟ: 1819) ಅಡಿಯಿದೆ. ಮಳೆ ನೀರನ್ನೇ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಲಾಗುತ್ತಿದ್ದು, ಹೊರಹರಿವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನ ನೀರಿನ ಮಟ್ಟ 1808.20 ಅಡಿ ನೀರು ಸಂಗ್ರಹವಾಗಿತ್ತು.
ಭದ್ರಾ ಜಲಾಶಯದ ನೀರಿನ ಮಟ್ಟ 147 ಅಡಿ 60 ಇಂಚು (ಗರಿಷ್ಠ ಮಟ್ಟ: 186) ಇದೆ. 8333 ಕ್ಯೂಸೆಕ್ ಒಳಹರಿವಿದ್ದು, 220 ಕ್ಯೂಸೆಕ್ ಹೊರಹರಿವಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 184 ಅಡಿ 10 ಇಂಚು ಇತ್ತು.