ದೇವೇಗೌಡ, ಸಿದ್ದರಾಮಯ್ಯ ಇಬ್ಬರೂ ಬೆನ್ನಿಗೆ ಚೂರಿ ಹಾಕುವವರೆ: ಸಂಸದ ವಿ.ಶ್ರೀನಿವಾಸಪ್ರಸಾದ್
ಮೈಸೂರು,ಆ.23: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಬೆನ್ನಿಗೆ ಚೂರಿ ಹಾಕುವವರೇ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ವಿ.ಶ್ರೀನಿವಾಸಪ್ರಸಾದ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಚ್.ಡಿ.ದೇವೇಗೌಡ ಬೆನ್ನಿಗೆ ಚೂರಿ ಹಾಕಿ ಮೇಲೆ ಬಂದವರು. ಇನ್ನು, ಸಿದ್ದರಾಮಯ್ಯ ಇದಕ್ಕೆ ಹೊರತಲ್ಲ, ಅವರೂ ಸಹ ಬೆನ್ನಿಗೆ ಚೂರಿ ಹಾಕಿಯೇ ಮೇಲೆ ಬಂದವರು ಎಂದು ಹೇಳಿದರು.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಬಾಯಿಗೆ ಬಂದ ಹಾಗೆ ಮಾತನಾಡಿದರು. ಅವರಪ್ಪರಾಣೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ನಂತರ ಲೋಕಸಭಾ ಚುನಾವಣೆಯಲ್ಲಿ ಅಕ್ಕಪಕ್ಕದಲ್ಲಿ ಕುಳಿತು ಪ್ರಚಾರ ಮಾಡಿದರು, ಇದೀಗ ಸಮ್ಮಿಶ್ರ ಸರಕಾರ ಬಿದ್ದ ನಂತರ ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಜನ ಎಲ್ಲವನ್ನೂ ನೋಡುತ್ತಿದ್ದಾರೆ, ಇವರ ಹೇಳಿಕೆಗಳನ್ನು ನೋಡಿ ಅಸಹ್ಯ ಪಡುತ್ತಿದ್ದಾರ. ವಿರೋಧ ಪಕ್ಷದಲ್ಲಿ ಕುಳಿತಿದ್ದೀರಿ. ಈಗಲಾದರೂ ಗಂಭೀರವಾಗಿ ಇರುವುದನ್ನು ಕಲಿಯಿರಿ ಎಂದು ಹೇಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಯಾವ ರೀತಿ ನಡೆದುಕೊಂಡರು ಎಂಬುದನ್ನು ಅರ್ಥಮಾಡಿಕೊಳ್ಳಲಿ. ದುರಹಂಕಾರ, ದರ್ಪ ಹೆಚ್ಚುದಿನ ನಡೆಯುವುದಿಲ್ಲ ಎಂದು ಹೇಳಿದರು.