ಸಂತ್ರಸ್ತರಿಗೆ ನೆರವಾಗಬೇಕಾದವರು ಖಾತೆಗಾಗಿ ದಿಲ್ಲಿಯಲ್ಲಿದ್ದಾರೆ: ಸತೀಶ್ ಜಾರಕಿಹೊಳಿ ಟೀಕೆ
ಬೆಳಗಾವಿ, ಆ. 30: ಭಾರಿ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನತೆಯ ನೆರವಿಗೆ ಧಾವಿಸಬೇಕಿದ್ದ ಕೆಲವರು ಹೊಸದಿಲ್ಲಿಗೆ ಹೋಗಿ ಕುಳಿತಿದ್ದಾರೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ಶುಕ್ರವಾರ ಗೋಕಾಕ್ ಕ್ಷೇತ್ರದಲ್ಲಿ ನೆರೆ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ಕ್ಷೇತ್ರದ ಜನರ ಸಮಸ್ಯೆ ಆಲಿಸಲು ಅವರು ಗೋಕಾಕ್ಗೆ ಬರಬೇಕಿತ್ತು. ಆದರೆ, ಅವರು ಒಮ್ಮೆಯೂ ಇತ್ತ ಸುಳಿಯಲಿಲ್ಲ ಎಂದು ಟೀಕಿಸಿದರು.
ರಾಜಕೀಯಕ್ಕೆ ಬಂದು ಅವರು ನೂರಾರು ಕೋಟಿ ರೂ.ಆಸ್ತಿ ಸಂಪಾದನೆ ಮಾಡಿದರೂ, ಕ್ಷೇತ್ರದ ಜನರ ಕಷ್ಟವನ್ನು ಆಲಿಸಲು ಬಂದಿಲ್ಲ. ಚುನಾವಣೆಯಲ್ಲಿ 500 ರೂ.ನೋಟು ಕೊಟ್ಟರೆ ಜನತೆ ಮತ ನೀಡುತ್ತಾರೆಂಬ ಮನೋಭಾವದಲ್ಲಿ ಇದ್ದಂತಿದೆ ಎಂದು ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಖಾತೆಗಾಗಿ ದಿಲ್ಲಿಗೆ ಹೋಗಿದ್ದಾರೆ: ಇನ್ನು ಐದು ವರ್ಷಕ್ಕೊಮ್ಮೆ ಬಂದರೆ ಸಾಕು, ಸೇವೆ ಮಾಡುವ ಅವಶ್ಯಕತೆ ಇಲ್ಲ ಎಂದು ಅವರು ಭಾವಿಸಿದ್ದಾರೆ. ನಿಮ್ಮ ಸೇವೆ ಮಾಡಬೇಕಾದವರು ಒಳ್ಳೆಯ ಖಾತೆ ಬೇಕೆಂದು ಹೊಸದಿಲ್ಲಿಯಲ್ಲಿ ಕುಳಿತಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಲೇವಡಿ ಮಾಡಿದರು.
ರಾಜಕೀಯ ಅಧಿಕಾರಕ್ಕಾಗಿ ಕೆಲವರು ಹೊಡೆದಾಡುತ್ತಿದ್ದಾರೆ. ಆದರೆ, ಪ್ರವಾಹ ಸಂತ್ರಸ್ತರಿಗೆ ಸತೀಶ್ ಶುಗರ್ಸ್ನಿಂದ ನಿಸ್ವಾರ್ಥ ಸೇವೆ ಮಾಡತ್ತಿದ್ದೇವೆ. ನಮ್ಮ ಸೇವೆ ಮತಕ್ಕಾಗಿ ಅಲ್ಲ, ಜನರಿಗಾಗಿ. ಆದರೆ, ಅನರ್ಹ ಶಾಸಕರ ಪಿಎಗಳು ಎಲ್ಲ ಕೆಲಸ ನಾವೇ ಮಾಡಿದ್ದೇವೆಂದು ಹೇಳಿಕೊಳ್ಳುತ್ತಿದ್ದಾರೆ. ನಾವು ಮಾಡಿದ ಕೆಲಸಕ್ಕೆ ನಮಗೆ ಶ್ರೇಯಸ್ಸು ಸಿಗಬೇಕು ಎಂದು ತಿಳಿಸಿದರು.