ಮೈಸೂರು: 'ಕಾವೇರಿ ಕೂಗು' ಬೈಕ್ ರ್ಯಾಲಿಗೆ ಯದುವೀರ್ ಒಡೆಯರ್ ಚಾಲನೆ
ಮೈಸೂರು,ಸೆ.6: ಕಾವೇರಿ ನದಿ ಉಳಿವಿಗಾಗಿ ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ನಡೆಯುತ್ತಿರುವ ‘ಕಾವೇರಿ ಕೂಗು’ ಅಭಿಯಾನ ಬೈಕ್ ರ್ಯಾಲಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
ನಗರದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಶುಕ್ರವಾರ ಬೆಳಗ್ಗೆ ರಾಜವಂಶಸ್ಥ ಯದುವೀರ್ ಒಡೆಯರ್ ಜಾಥಾಕ್ಕೆ ಚಾಲನೆ ನೀಡಿದರು. ಸದ್ಗುರು ಜಗ್ಗಿ ವಾಸುದೇವ ನೇತೃತ್ವದಲ್ಲಿ ನಡೆಯುತ್ತಿರುವ ಬೈಕ್ ರ್ಯಾಲಿ ಅರಮನೆ-ಗನ್ಹೌಸ್ ವೃತ್ತ-ರಾಮಸ್ವಾಮಿ ವೃತ್ತ-ರೈಲ್ವೆ ನಿಲ್ದಾಣ-ದೊಡ್ಡ ಗಡಿಯಾರ ವೃತ್ತ ಸೇರಿದಂತೆ 5 ಕಿಲೋಮೀಟರ್ ಸಂಚರಿಸಿತು.
ಕಾವೇರಿ ಉಗಮ ಸ್ಥಾನ ತಲಕಾವೇರಿಯಿಂದ ಅಂತ್ಯದವರೆಗೆ ಜಾಗೃತಿ ಅಭಿಯಾನ ನಡೆಯಲಿದೆ. ಸರ್ಕಾರ ಮರ ಬೆಳೆಸಲು ಸಬ್ಸಿಡಿ ಕೊಡಲು ಮುಂದೆ ಬಂದಿದೆ. ಇನ್ನೆರಡು ವಾರದಲ್ಲಿ ಇದರ ಘೋಷಣೆ ಆಗಲಿದೆ. ಆಗ ಹೆಚ್ಚು ರೈತರು ಮರ ಬೆಳಸಲು ಅನುಕೂಲ ಆಗಲಿದೆ. ಮರ ಬೆಳೆದ ರೈತನಿಗೆ ಅದರ ಹಕ್ಕು ಸಿಕ್ಕಾಗ ಮಾತ್ರ ರೈತರು ಹೆಚ್ಚು ಮರ ಬೆಳೆಸಲು ನಿಲ್ಲುತ್ತಾರೆ. ನದಿ ಉಳಿವಿಗಾಗಿ ಎಲ್ಲರೂ ಕೈ ಜೋಡಿಸಬೇಕು ಎಂದು ಸದ್ಗುರು ವಾಸುದೇವ್ ಮನವಿ ಮಾಡಿದರು.
ಬೈಕ್ ರ್ಯಾಲಿಯಲ್ಲಿ ನೂರಾರು ಅನುಯಾಯಿಗಳು ಭಾಗಿಯಾಗಿ ‘ಕಾವೇರಿ ಕೂಗು’ ಅಭಿಯಾನಕ್ಕೆ ಸಾಥ್ ನೀಡಿದರು.