ಮಲೆನಾಡಿನಲ್ಲಿ ಮುಂದುವರಿದ ಭಾರೀ ಮಳೆ
ಚಿಕ್ಕಮಗಳೂರು, ಎಆ.7: ಮಲೆನಾಡಲ್ಲಿ ಮೂರು ದಿನಗಳಿಂದ ಎಡಬಿಡದೆ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಭೂಕುಸಿತಗಳಾಗುತ್ತಿರುವುದು ವರದಿಯಾಗಿದೆ.
ಮೂಡಿಗೆರೆಯ ದಾರದಹಳ್ಳಿ, ಬೈರಾಪುರ, ಕೊಟ್ಟಿಗೆಹಾರ ಸುತ್ತಾಮುತ್ತ ಭಾರೀ ಮಳೆಯಾಗುತ್ತಿದೆ. ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಚಿಕ್ಕಮಗಳೂರು ತಾಲೂಕಿನಲ್ಲೂ ಮಳೆ ಬಿರುಸಾಗಿಯೇ ಸುರಿಯುತ್ತಿದೆ. ಹಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.
ಮುಂದುವರಿದ ಮಳೆಯಿಂದ ಮಲೆನಾಡಿನಲ್ಲಿ ಗುಡ್ಡ ಕುಸಿತ ಸಂಭವಿಸಿರುವುದು ಜನತೆಯನ್ನು ಆತಂಕಗೊಳಿಸಿದೆ. ನದಿಗಳ ಹರಿವಿನ ಮಟ್ಟ ಏರಿಕೆಯಾಗುತ್ತಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.
Next Story