ಕಾಶ್ಮೀರದಲ್ಲಿ 'ಸಂಸ್ಕೃತಿ ಕೇಂದ್ರ' ತೆರೆಯಲು ರಾಜ್ಯ ಸರಕಾರ ಸಿದ್ಧತೆ ?
ಬೆಂಗಳೂರು, ಸೆ.7: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ 370 ಕಲಂ ರದ್ದುಪಡಿಸಿದ ಬಳಿಕ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ಸಂಸ್ಕೃತಿ ಕೇಂದ್ರ’ ತೆರೆಯಲು ಉದ್ದೇಶಿಸಲಾಗಿದೆ.
ಕಾಶ್ಮೀರದಲ್ಲಿ ಕರ್ನಾಟಕದ ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳು, ಹೂಡಿಕೆದಾರರು ತಮ್ಮ ಅಸ್ತಿತ್ವ ಬೇರೂರಿಸಲು ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಇದರ ನಡುವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಕೇಂದ್ರ ತೆರೆಯಲು ಮುಂದಾಗಿದೆ. ಕರ್ನಾಟಕದ ಕಲೆಗಳನ್ನು ಅಲ್ಲಿ ಪರಿಚಯಿಸುವ ಮೂಲಕ, ಕಾಶ್ಮೀರಕ್ಕೆ ಬರುವ ವಿವಿಧ ರಾಜ್ಯ ಹಾಗೂ ದೇಶಗಳ ಪ್ರವಾಸಿಗರಿಗೆ ರಾಜ್ಯದ ಕುರಿತು ಪರಿಚಯ ನೀಡಿ, ಇಲ್ಲಿಗೂ ಆಹ್ವಾನ ನೀಡುವುದು ಇದರ ಉದ್ದೇಶವಾಗಿದೆ ಎನ್ನಲಾಗುತ್ತಿದೆ.
ಸಂಸ್ಕೃತ ಕೇಂದ್ರ ಯಾವ ರೀತಿಯಲ್ಲಿ ಅನುಷ್ಠಾನ ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಫೋಟೋ ಪ್ರದರ್ಶನ, ವಿವರಣಾ ಕೈಪಿಡಿ, ವಿಡಿಯೋ ಪ್ರದರ್ಶನ ಸೇರಿ ರಾಜ್ಯದ ಕಲಾವಿದರಿಂದ ಪ್ರದರ್ಶನ, ಕಾಶ್ಮೀರ ಕಲಾವಿದರಿಗೆ ರಾಜ್ಯದಲ್ಲಿ ಅವಕಾಶ ಕಲ್ಪಿಸುವ ಬಗ್ಗೆಯೂ ಆಲೋಚನೆಗಳಿವೆ. ಶೀಘ್ರವೇ ಇದೊಂದು ಅಂತಿಮ ರೂಪ ಪಡೆದುಕೊಳ್ಳಲಿದೆ.
ಪ್ರವಾಸೋದ್ಯಮ ಇಲಾಖೆಯ ಭಾಗವಾಗಿ ಕೆಎಸ್ಟಿಡಿಸಿಯಿಂದ ಕಾಶ್ಮೀರದಲ್ಲಿ ಹೊಟೇಲ್ ಆರಂಭಿಸಲು ಚಿಂತನೆ ನಡೆದಿದೆ. ಕೆಎಲ್ಇ ಸಂಸ್ಥೆಯು ಶೈಕ್ಷಣಿಕ ಕೇಂದ್ರವನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಕಾಶ್ಮೀರದಲ್ಲಿ ಕೇಂದ್ರ ಸ್ಥಾಪನೆ ಮಾಡಲು ಬೇಕಾದ ಭೂಮಿ ನೀಡುವಂತೆ ಅಲ್ಲಿನ ರಾಜ್ಯಪಾಲರಿಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ ಎನ್ನಲಾಗಿದೆ.