ತಲಕಾವೇರಿ ಬ್ರಹ್ಮಗಿರಿ ಬೆಟ್ಟದಲ್ಲಿ ಆತಂಕಕಾರಿ ಬಿರುಕು
ಮಡಿಕೇರಿ, ಸೆ.7: ಕಾವೇರಿಯ ಉಗಮ ಸ್ಥಾನ ತಲಕಾವೇರಿ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಪಶ್ಚಿಮ ಘಟ್ಟ ವಲಯದ ಬ್ರಹ್ಮಗಿರಿ ಬೆಟ್ಟದಲ್ಲಿ ಮತ್ತೆ ಆತಂಕಕಾರಿ ಬಿರುಕು ಕಾಣಿಸಿಕೊಂಡಿದೆ.
ಆಗಸ್ಟ್ ಎರಡನೇ ವಾರ ಸುರಿದ ಧಾರಾಕಾರ ಮಳೆಯ ಸಂದರ್ಭ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆ.18 ರಂದು ಸ್ಥಳಕ್ಕೆ ಭೂವಿಜ್ಞಾನಿಗಳು ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ವಿಜ್ಞಾನಿಗಳ ವರದಿ ಜಿಲ್ಲಾಡಳಿತದ ಕೈಸೇರುವ ಮೊದಲೇ ಮತ್ತೆ ಬೆಟ್ಟದಲ್ಲಿ ಬಿರುಕಿನ ಭೀಕರತೆ ಹೆಚ್ಚಾಗಿದೆ.
ಮೂರು ದಿನಗಳ ಹಿಂದೆ ತಲಕಾವೇರಿ ವ್ಯಾಪ್ತಿಯಲ್ಲಿ ಹತ್ತು ಇಂಚಿಗೂ ಅಧಿಕ ಮಳೆಯಾಗಿತ್ತು. ಸಾರ್ವಜನಿಕರು ಪ್ರವೇಶಿಸದ ದಟ್ಟಾರಣ್ಯ ಭಾಗದ ಬೆಟ್ಟಕ್ಕೆ ಇಂದು ಅರಣ್ಯಾಧಿಕಾರಿಗಳು ಭೇಟಿ ನೀಡಿದ ಸಂದರ್ಭ ಆತಂಕಕಾರಿ ಬಿರುಕು ಬೆಳಕಿಗೆ ಬಂದಿದೆ. ಇದೀಗ ಅಕ್ಕಪಕ್ಕದ ಗ್ರಾಮಗಳಲ್ಲಿ ಆತಂಕ ಸೃಷ್ಟಿಯಾಗಿದ್ದು, ಜಿಲ್ಲಾಡಳಿತ ಅಗತ್ಯ ಮುಂಜಾಗೃತಾ ಕ್ರಮಕ್ಕೆ ಮುಂದಾಗಿದೆ.
ಕಳೆದ ತಿಂಗಳು ಭಾಗಮಂಡಲದ ಕೋರಂಗಾಲದಲ್ಲಿ ಭೂಕುಸಿತ ಉಂಟಾಗಿ ಐವರು ಮೃತಪಟ್ಟ ದುರ್ಘಟನೆಯ ದುಃಖ ಆರುವ ಮೊದಲೇ ಬ್ರಹ್ಮಗಿರಿ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡು ಮತ್ತೆ ಆತಂಕ ಸೃಷ್ಟಿಸಿದೆ.
ಮಳೆ ಕಡಿಮೆ
ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ಒಂದೂವರೆ ಇಂಚು ಮಳೆಯಾಗಿದ್ದು, ಸಾಧಾರಣ ಮಳೆ ಮುಂದುವರೆದಿದೆ. ಇದರಿಂದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಮುಖಗೊಂಡಿದೆ. ಕಾವೇರಿ ನದಿ ಪಾತ್ರದ ಪ್ರದೇಶಗಳಲ್ಲೂ ಹದವಾಗಿ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮಳೆಯ ಪ್ರಮಾಣ ಶನಿವಾರ ಒಂದಷ್ಟು ತೀವ್ರತೆಯನ್ನು ಪಡೆದುಕೊಂಡಿತು. ವೀರಾಜಪೇಟೆ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಮಳೆ ಮುಂದುವರೆದಿದ್ದು, ಕಳೆದೊಂದು ದಿನದ ಅವಧಿಯಲ್ಲಿ ವೀರಾಜಪೇಟೆಯಲ್ಲಿ ಒಂದು ಇಂಚು, ಹುದಿಕೇರಿಯಲ್ಲಿ 2, ಶ್ರೀಮಂಗಲದಲ್ಲಿ 2.50 ಇಂಚು ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ವಿಭಾಗದಲ್ಲಿ 6 ಇಂಚಿನಷ್ಟು ಮಳೆಯಾಗಿದೆ.