ರಸ್ತೆ ರಿಪೇರಿಗೂ ಸಂಚಾರಿ ನಿಯಮ ಉಲ್ಲಂಘನೆ ದಂಡಕ್ಕೂ ಯಾವುದೇ ಸಂಬಂಧವಿಲ್ಲ: ಡಿಸಿಎಂ ಲಕ್ಷ್ಮಣ ಸವದಿ
ಮೈಸೂರು,ಸೆ.8: ರಸ್ತೆಗೂ ಸಂಚಾರಿ ನಿಯಮ ಉಲ್ಲಂಘನೆ ದಂಡಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ರವಿವಾರ ಮೈಸೂರಿಗೆ ಆಗಮಿಸಿದ ಅವರು, ಎಲ್ಲಡೆ ಸಂಚಾರಿ ನಿಯಮ ಉಲ್ಲಂಘನೆಯ ದುಬಾರಿ ದಂಡ ವಸೂಲಿಗೆ ವಿರೋಧ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಮಾಧ್ಯಮದಗಳ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು. ರಸ್ತೆ ಸರಿಯಲ್ಲ ಎಂದು ದಂಡ ವಸೂಲಿ ಮಾಡದೆ ಇರಲು ಸಾಧ್ಯವಿಲ್ಲ. ರಸ್ತೆ ರಿಪೇರಿ ಕೆಲಸವನ್ನು ಲೋಕೋಪಯೋಗಿ ಇಲಾಖೆ ಮತ್ತು ಜಿ.ಪಂ ಮಾಡಬೇಕು. ರಸ್ತೆಗೂ ಸಂಚಾರಿ ನಿಯಮ ಉಲ್ಲಂಘನೆ ದಂಡಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದರು.
ಕೇಂದ್ರ ಸರಕಾರದಿಂದ ಹೆಚ್ಚಿನ ದಂಡ ವಸೂಲಿಗೆ ಆದೇಶ ಬಂದಿದೆ. ಅದರಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಡಿಎಲ್, ಇನ್ಶೂರೆನ್ಸ್ ಸೇರಿದಂತೆ ನಿಯಮ ಉಲ್ಲಂಘನೆ ಮಾಡಿದರೆ ದಂಡ ಕಟ್ಟಬೇಕು. ರಸ್ತೆ ರಿಪೇರಿಗೂ ಅದಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.
ದೇಶಾದ್ಯಂತ ಪರಿಷ್ಕೃತ ದರ ವಸೂಲಿ ಪ್ರಕ್ರಿಯೆ ನಡೆಯುತ್ತಿದೆ. ಅದರಂತೆ ರಾಜ್ಯದಲ್ಲೂ ಅನ್ವಯವಾಗಿದೆ. ನಿಯಮ ಉಲ್ಲಂಘನೆ ಮಾಡದೆ ಸಾರ್ವಜನಿಕರು ಸಹಕರಿಸಿ ಎಂದು ಹೇಳಿದರು. ನಂತರ ಸುತ್ತೂರಿಗೆ ತೆರಳಿ ಶ್ರೀಶಿವರಾತ್ರೀಶ್ವರರ ಗದ್ದಿಗೆಯಲ್ಲಿ ಪೂಜೆ ಸಲ್ಲಿಸಿದರು.