'ಚಂದ್ರಯಾನ ಮಿಷನ್'ಗೆ ದುರಾದೃಷ್ಟ ತಂದದ್ದು ಮೋದಿ: ಕುಮಾರಸ್ವಾಮಿ ಆರೋಪ
ಬೆಂಗಳೂರು, ಸೆ.13: ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಆವರಣಕ್ಕೆ ಕಾಲಿಟ್ಟಾಗ ಜತೆಗೆ ದುರಾದೃಷ್ಟವನ್ನೂ ತಂದರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ಲೇಷಿಸಿದ್ದಾರೆ.
ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ 7ರಂದು ಮುಂಜಾನೆ ಚಂದ್ರನ ಮೇಲ್ಮೈನಲ್ಲಿ ವಿಕ್ರಮ್ ಲ್ಯಾಂಡರ್ ಸುಲಲಿತವಾಗಿ ಇಳಿಯಲು ಸಾಧ್ಯವಾಗದೇ ಸಂಪರ್ಕ ಕಡಿತಗೊಳ್ಳಲು ಮೋದಿಯವರ ಉಪಸ್ಥಿತಿಯೇ ಕಾರಣ ಎಂದು ಅವರು ಆರೋಪಿಸಿದ್ದಾರೆ.
"ಈ ಮಿಷನ್ಗೆ ವಿಜ್ಞಾನಿಗಳು 10-12 ವರ್ಷಗಳಿಂದ ಕಠಿಣ ಪರಿಶ್ರಮ ಹಾಕಿದ್ದರೂ, ತಾವೇ ಸ್ವತಃ ಚಂದ್ರಯಾನ-2 ಇಳಿಸುತ್ತಿದ್ದೇವೆ ಎಂದು ಬಿಂಬಿಸುವ ಸಲುವಾಗಿ ಮೋದಿ ಬಂದರು. ಈ ಯೋಜನೆಗೆ ಸಂಪುಟದ ಅನುಮೋದನೆ ಸಿಕ್ಕಿದ್ದು 2008-09ರಲ್ಲಿ. ಚಂದ್ರಯಾನ ಮಿಷನ್ ಆರಂಭವಾದದ್ದೇ ತಮ್ಮಿಂದ ಎಂದು ಪ್ರತಿಪಾದಿಸುವ ಪ್ರಯತ್ನವಾಗಿ ಅವರು ಇಲ್ಲಿಗೆ ಬಂದರು. ನನಗೆ ತಿಳಿಯದು; ಆದರೆ ಬಹುಶಃ ಅವರು ಇಸ್ರೋ ಕೇಂದ್ರಕ್ಕೆ ಬಂದದ್ದೇ ವಿಜ್ಞಾನಿಗಳಿಗೆ ದುರಾದೃಷ್ಟ ತಂದಿತು" ಎಂದು ಕುಮಾರಸ್ವಾಮಿ ಹೇಳಿದರು.