ಡಿಕೆಶಿ ವಿರುದ್ಧ ಸಮಗ್ರ ತನಿಖೆ ನಡೆಯಲಿ: ಎಸ್.ಆರ್.ಹಿರೇಮಠ್
ಮೈಸೂರು,ಸೆ.13: ಅಕ್ರಮ ಹಣ ಹಾಗೂ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಬಂಧಿಯಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಪಿಸಿ ಆಕ್ಟ್ ಅಡಿ ದೂರು ದಾಖಲಿಸಿ ಸಮಗ್ರ ತನಿಖೆ ನಡೆಸಬೇಕೆಂದು ಸಾಮಾಜಿಕ ಹೋರಾಟಗಾರ ಹಾಗೂ ಸಿಟಿಜನ್ ಫಾರ್ ಡೆಮಾಕ್ರಿಸಿ ಸಂಸ್ಥೆ ಅಧ್ಯಕ್ಷ ಎಸ್.ಆರ್.ಹಿರೇಮಠ್ ಸಿಬಿಐ ಗೆ ಮನವಿ ಮಾಡಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಲ್ಲಿ ನೂರು ಪಟ್ಟು ಅಕ್ರಮವಾಗಿ ಆಸ್ತಿ ಸಂಪಾದಿಸಿರುವ ಡಿ.ಕೆ.ಶಿವಕುಮಾರ್ ಸಂಪತ್ತಿನ ಬಗ್ಗೆ ಸಮಗ್ರ ತನಿಖೆ ನಡೆಸಿ ಸರ್ಕಾರ ಬೊಕ್ಕಸಕ್ಕೆ ನಷ್ಟವಾಗಿರುವ ಹಣವನ್ನು ವಶಪಡಿಸಿಕೊಳ್ಳಬೇಕೆಂದು ಒತ್ತಾಯಿಸಿದ ಅವರು, ಡಿಕೆಶಿ ಅವರ ಅಕ್ರಮ ಆದಾಯ ಹಾಗೂ ಆಸ್ತಿಗೆ ಸಂಬಂಧಿಸಿದಂತೆ 191 ಪುಟಗಳ 30 ಅನುಬಂಧಗಳನ್ನೊಳಗೊಂಡ ಸುಧೀರ್ಘ ಪತ್ರವನ್ನು ಪ್ರಧಾನ ಮಂತ್ರಿ, ಸಿಬಿಐ ಹಾಗೂ ಲೋಕಪಾಲ್ ಗೆ ಬರೆಯಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿರುವುದಾಗಿ ತಿಳಿಸಿದರು.
ಪತ್ರದಲ್ಲಿ ಮೈಸೂರು ಮಿನರಲ್ ನಿಂದ 10.8 ಲಕ್ಷ ಎಂಟಿಎಸ್ ಉತ್ಕೃಷ್ಟ ಗುಣಮಟ್ಟದ ಕಬ್ಬಿಣ ಅದಿರು ಲೂಟಿ ಡಿ.ಕೆ.ಶಿವಕುಮಾರ್ ಹಾಗೂ ಸುರೇಶ ಕುಟುಂಬ ಸದಸ್ಯರನ್ನೊಳಗೊಂಡ 8 ಕಂಪನಿಗಳ ಮೂಲಕ ಹೌಸಿಂಗ್ ಬಿಲ್ಡಿಂಗ್ ಕೋ. ಅಪರೇಟಿವ್ ಹೆಸರಿನಲ್ಲಿ 3 ಲಕ್ಷ ಕೋಟಿ ರೂ. ಹಗರಣ ಹಾಗೂ ಚನ್ನಗಾನಹಳ್ಳಿಯ 4 ಎಕರೆ 30 ಗುಂಟೆ ಭೂಮಿ ಸೇರಿದಂತೆ ಪ್ರಮುಖ ಮೂರು ಪ್ರಕರಣಗಳನ್ನು ಪತ್ರದಲ್ಲಿ ಉಲ್ಲೇಖಿಸಿ ಸಾಕ್ಷಿ ಸಮೇತ ಕಳಿಸಲಾಗಿದ್ದು, ಸೂಕ್ತ ರೀತಿಯಲ್ಲಿ ಕ್ರಮಕೈಗೊಳ್ಳುವ ಮೂಲಕ ಭ್ರಷ್ಟರನ್ನು ಮಟ್ಟಹಾಕಬೇಕೆಂದು ತಿಳಿಸಿದರು.
ಉತ್ತರ ಕರ್ನಾಟಕ ಬಹುಭಾಗ ನೆರೆ ಹಾವಳಿಗೆ ತುತ್ತಾಗಿದ್ದು, ಬೀದಿಗೆ ಬಿದಿರುವ ಸಂತ್ರಸ್ತರಿಗೆ ಸೂಕ್ತ ರೀತಿ ಪರಿಹಾರವನ್ನು ಒದಗಿಸಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜನಸಂಗ್ರಾಮ ಪರಿಷತ್ ಸದಸ್ಯ ಪ್ರಸನ್ನ, ಮೈಸೂರು ವಿಭಾಗೀಯ ಸಂಚಾಲಕ ನಗರ್ಲೆ ವಿಜಯಕುಮಾರು ಉಪಸ್ಥಿತರಿದ್ದರು.