ಕಾವೇರಿ ಕೂಗು ಯೋಜನೆಗೆ ತಡೆ ಕೋರಿ ಅರ್ಜಿ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಸೆ.17: ಕಾವೇರಿ ಕೂಗು ಯೋಜನೆಯಡಿ ಗಿಡ ಬೆಳೆಸಲು ಸಾರ್ವಜನಿಕರಿಂದ ಹಣ ವಸೂಲಿಗೆ ಮುಂದಾಗಿರುವುದು ಆಕ್ಷೇಪಾರ್ಹವಾಗಿದೆ ಎಂದು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ವಕೀಲ ಎ.ವಿ.ಅಮರನಾಥನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಆಕ್ಷೇಪಣೆ ಏನು: ಕಾವೇರಿ ತಟದ 639 ಕಿ.ಮೀ ಉದ್ದಗಲಕ್ಕೂ 253 ಕೋಟಿ ಗಿಡ ನೆಡಲು ಇಶಾ ಫೌಂಡೇಶನ್ ಉದ್ದೇಶಿಸಿದೆ. ಇದಕ್ಕಾಗಿ ಸಾರ್ವಜನಿಕರಿಂದ 1 ಗಿಡಕ್ಕೆ 42 ರೂ.ಪಡೆಯಲು ಮುಂದಾಗಿದೆ. ಇದರ ಒಟ್ಟು ಮೊತ್ತ 10,626 ಕೋಟಿ ಆಗುತ್ತದೆ. ಇದೊಂದು ಆತಂಕಕಾರಿ ವಿಚಾರ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಈ ಅರ್ಜಿ ಇತ್ಯರ್ಥವಾಗುವ ತನಕ ಇಶಾ ಫೌಂಡೇಶನ್ ಕಾವೇರಿ ಕೂಗು ಯೋಜನೆಯಡಿ ಯಾವುದೇ ಹಣ ಸಂಗ್ರಹ ಮಾಡದಂತೆ ತಡೆ ನೀಡಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ.
Next Story