ಬಿಜೆಪಿ ಸ್ವಾಯತ್ತ ಸಂಸ್ಥೆಗಳನ್ನು ಕೈಗೊಂಬೆ ಮಾಡಿಕೊಂಡು ಚುನಾವಣೆ ಮುಂದೂಡಿದೆ: ಎಚ್.ಡಿ.ದೇವೇಗೌಡ
ಬೆಂಗಳೂರು, ಸೆ.28: ಸ್ವಾಯತ್ತ ಸಂಸ್ಥೆಗಳನ್ನು ಕೈಗೊಂಬೆ ಮಾಡಿಕೊಂಡು ಬಿಜೆಪಿ ಚುನಾವಣೆ ಮುಂದೂಡಿದೆ. ರಾಜಕೀಯ ಸೇಡಿನಿಂದ ಹಲವು ನಾಯಕರನ್ನು ಹೆದರಿಸಿ ಬೆದರಿಸಲಾಗುತ್ತಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಸೀಗೇಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಯತ್ತ ಸಂಸ್ಥೆಗಳನ್ನು ಕೈಗೊಂಬೆ ಮಾಡಿಕೊಂಡು ಬಿಜೆಪಿ ಚುನಾವಣೆ ಮುಂದೂಡಿದೆ. ರಾಜಕೀಯ ಸೇಡಿನಿಂದ ಹಲವು ನಾಯಕರನ್ನು ಹೆದರಿಸಿ ಬೆದರಿಸಲಾಗುತ್ತಿದೆ. ರಾಷ್ಟ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನಾಯಕರು ಭ್ರಷ್ಟಾಚಾರ ಹಲವು ಹಗರಣ ಮಾಡುತ್ತಿದ್ದರೂ ಕೇಂದ್ರ ನಾಯಕರು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರದಲ್ಲಿ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿದ್ದರೂ ಖಂಡಿಸುವವರನ್ನು ಇನ್ನಿಲ್ಲದಂತೆ ಬೆದರಿಕೆ ಹಾಕಿ, ಕೇಸು ದಾಖಲು ಮಾಡಿ ಜೈಲಿಗೆ ಹಾಕಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಬಿಜೆಪಿ ಒಂದಾಗಿ ಚುನಾವಣೆ ನಡೆಸುತ್ತಿದ್ದು, ಅಲ್ಲಿ ಬೇರೆ ಪಕ್ಷ ಅಧಿಕಾರಕ್ಕೆ ಬರದಂತೆ ಇನ್ನಿಲ್ಲದಂತೆ ಸಂಚು ರೂಪಿಸಲಾಗುತ್ತಿದೆ ಎಂದು ಅವರು ವಿಷಾದಿಸಿದರು.
ಮತ್ತೊಂದು ಸಾರ್ವಜನಿಕ ಚುನಾವಣೆ ಬರುವ ಸಾಧ್ಯತೆ ಕಂಡುಬರುತ್ತಿದ್ದು, ಮತ್ತೊಮ್ಮೆ ಜೆಡಿಎಸ್ ಅಧಿಕಾರಕ್ಕೆ ತರಲು ಮೂರು ತಿಂಗಳಿಂದ ಸಂಘಟನೆ ಮಾಡಲಾಗುತ್ತಿದೆ ಎಂದ ಅವರು, ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದ ಜೆಡಿಎಸ್ ಉಳಿದಿದೆ. ಪಕ್ಷದ ಬೆಳವಣಿಗೆಯಲ್ಲಿ ನಾಯಕರಿಗಿಂತ ಕಾರ್ಯಕರ್ತರ ತ್ಯಾಗ, ಪರಿಶ್ರಮ ಹೆಚ್ಚಿದೆ ಎಂದರು.
ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಟಿ.ಎನ್.ಜವರಾಯಿಗೌಡ ಮಾತನಾಡಿ, ಜನರ ಸೇವೆಯೇ ನನ್ನ ಉಸಿರು, ಎರಡು ಬಾರಿ ಸೋಲಿಸಿದ್ದೀರಿ. ಈ ಬಾರಿ ನಿಮ್ಮ ಸೇವೆ ಮಾಡಲು ನಿಮ್ಮ ಸೇವಕನಿಗೆ ಭಿಕ್ಷೆ ನೀಡಿ, ರಕ್ಷಣೆ ನೀಡಿ, ಜನರ ಸೇವೆಗೋಸ್ಕರ ರಾಜಕೀಯ ಪ್ರವೇಶ ಮಾಡಿದ್ದೇನೆ ಎಂದರು.
ನಗರ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ನರಸಿಂಹಮೂರ್ತಿ, ಮಾರಗೊಂಡನಹಳ್ಳಿ ಕೆಂಪಣ್ಣ ಮಾತನಾಡಿ, ಪಕ್ಷದ ಸಿದ್ಧಾಂತ, ಪಕ್ಷ ನಿಷ್ಠೆ ಬದಲಿಸುವ ವ್ಯಕ್ತಿಗಳಿಗೆ ಪಾಠ ಕಲಿಸಿ, ಅಭಿವೃದ್ಧಿ ಕೆಲಸ ಮಾಡುವ ಎಚ್.ಡಿ.ದೇವೇಗೌಡ, ಜವರಾಯಿಗೌಡರಿಗೆ ಬೆಂಬಲಿಸುವಂತೆ ಕರೆ ನೀಡಿದರು.
ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಜಫ್ರುಲ್ಲಾಖಾನ್, ಉತ್ತರಹಳ್ಳಿ ಹೋಬಳಿ ಅಧ್ಯಕ್ಷ ಬಸವರಾಜು, ತಾವರೆಕೆರೆ ಹೋಬಳಿ ಅಧ್ಯಕ್ಷ ಶಂಕರೇಗೌಡ, ಕೋಡಿಪಾಳ್ಯ ದೇವರಾಜು, ಅರುಣ್ಗೌಡ, ತಿಪ್ಪೇನಹಳ್ಳಿ ಮಂಜುನಾಥ್, ರೇಷ್ಮಾ ಮುನಿಕೃಷ್ಣ, ದೊಡ್ಮನೆ ವೆಂಕಟೇಶ್, ಬಿ.ಎಂ.ಮಾರಣ್ಣ ಮಾತನಾಡಿದರು.
ರಾಹುಲ್ ಗಾಂಧಿ ಉತ್ತಮ ವ್ಯಕ್ತಿ. ಆದರೆ ರಾಜ್ಯದ ವಿಚಾರದ ಬಗ್ಗೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ರಾಜ್ಯದ ಕೆಲವು ನಾಯಕರು ತಪ್ಪು ಮಾಹಿತಿ ಒದಗಿಸಿ ದಾರಿ ತಪ್ಪಿಸಿದ್ದರಿಂದ ಕಾಂಗ್ರೆಸ್ ಹಿನ್ನಡೆಗೂ ಕಾರಣವಾಯಿತು. ಇದರಿಂದ ಸಮ್ಮಿಶ್ರ ಸರಕಾರ ಪತನಗೊಳ್ಳಲು ಕಾರಣರಾಗಿ, ಈಗಿನ ಸರಕಾರ ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಟ್ಟರು.
-ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ