ಕಬ್ಬು ನುರಿಸುವ ವ್ಯವಸ್ಥೆ ಮಾಡದಿದ್ದರೆ ದಸರಾಗೆ ಅಡ್ಡಿ: ರೈತ ಸಂಘದ ಮುಖಂಡರ ಎಚ್ಚರಿಕೆ
ಮಂಡ್ಯ, ಸೆ.30: ಮೈಷುಗರ್ ಮತ್ತು ಪಿಎಸ್ಎಸ್ಕೆ ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ ಸಾಗಿಸಿ ನುರಿಸುವ ಕೆಲಸವಾಗದಿದ್ದರೆ ನಾಡಹಬ್ಬ ದಸರಾಗೆ ಅಡ್ಡಿಪಡಿಸುವುದಾಗಿ ಕರ್ನಾಟಕ ರಾಜ್ಯ ರೈತಸಂಘ ಹಾಗು ಹಸಿರು ಸೇನೆ ಮುಖಂಡರು ಎಚ್ಚರಿಸಿದ್ದಾರೆ.
ಸಂಘಟನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಸೋಮವಾರ ಈ ಸಂಬಂಧ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದ ಅವರು, ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ದಸರಾ ದಿನದಂದು ರಾಮನಗರದಿಂದ ಮೈಸೂರುವರೆಗೆ ರಸ್ತೆ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದರು.
ಮೈಷುಗರ್, ಪಿಎಸ್ಎಸ್ಕೆ ಕಾರ್ಖಾನೆಗಳನ್ನು ಪುನಶ್ಚಂತನಗೊಳಿಸಲು ಹಾಗು ವ್ಯಾಪ್ತಿಯ ಕಬ್ಬನ್ನು ಮಂಡ್ಯ, ಮೈಸೂರು, ಚಾಮರಾಜನಗರದ ಕಾರ್ಖಾನೆಗಳಿಗೆ ಸಾಗಿಸುತ್ತಿರುವುದಕ್ಕೆ ಸ್ವಾಗತ. ಆದರೆ, ಸದರಿ ಕಾರ್ಖಾನೆಗಳಿಂದ ಎಲ್ಲ ಕಬ್ಬನ್ನು ನುರಿಸುವುದು ಕಷ್ಟ ಎಂದು ಬಡಗಲಪುರ ನಾಗೇಂದ್ರ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.
ಜಿಲ್ಲೆಯಲ್ಲಿ 13, 14 ತಿಂಗಳ ವಯಸ್ಸಿನ ಕಬ್ಬು ಕಟಾವಿಗೆ ಬಂದಿದ್ದು, ಇದೆಲ್ಲವನ್ನೂ ಅರೆಯಬೇಕಾದರೆ ಕನಿಷ್ಠ 9 ತಿಂಗಳು ಬೇಕು. ಆದ್ದರಿಂದ ರಾಜ್ಯದ ಇತರೆ ಕಾರ್ಖಾನೆಗಳು ಮತ್ತು ಹೊರ ರಾಜ್ಯದ ಕಾರ್ಖಾನೆಗಳಿಗೆ ಸಾಗಾಣೆ ವೆಚ್ಚ ಸಮೇತ ಸಾಗಿಸಲು ಸರಕಾರದ ಜತೆ ವ್ಯವಹರಿಸಿ ರೈತರನ್ನು ರಕ್ಷಿಸಬೇಕು. ಇಲ್ಲದಿದ್ದರೆ ರಸ್ತೆ ಬಂದ್ ಅನಿವಾರ್ಯವಾಗುತ್ತದೆ ಎಂದು ಅವರು ಹೇಳಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ರಾಮಕೃಷ್ಣಯ್ಯ, ಜಿಲ್ಲಾಧ್ಯಕ್ಷ ಎಸ್.ಸುರೇಶ್, ಪ್ರಧಾನ ಕಾರ್ಯದರ್ಶಿ ಬಿ.ಬೊಮ್ಮೇಗೌಡ, ಖಜಾಂಚಿ ಲಿಂಗಪ್ಪಾಜಿ, ಮಹಿಳಾಧ್ಯಕ್ಷೆ ಲತಾಶಂಕರ್ ಇತರ ಮುಖಂಡರು ಉಪಸ್ಥಿತರಿದ್ದರು.