ಕಲಾಪದ ವರದಿಗಾರಿಕೆಗೆ ಮಾಧ್ಯಮ ನಿರ್ಬಂಧಕ್ಕೆ ದಸಂಸ ಖಂಡನೆ
ಬೆಂಗಳೂರು, ಅ. 12: ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪ ವರದಿಗೆ ಮಾಧ್ಯಮಗಳ ನಿರ್ಬಂಧ ಹೇರಿ ಆದೇಶ ಹೊರಡಿಸಿರುವುದನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀ ನಾರಾಯಣ ನಾಗವಾರ ತೀವ್ರವಾಗಿ ಖಂಡಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಷ್ಟು ಮುಖ್ಯವೋ ಪತ್ರಿಕಾರಂಗವೂ ಅಷ್ಟೇ ಮುಖ್ಯ. ಸಮಾಜದಲ್ಲಿ ನಡೆಯುವ ವಿದ್ಯಮಾನಗಳನ್ನು ಜನರಿಗೆ ತಿಳಿಸುವುದು ಮಾಧ್ಯಮ ಪ್ರತಿನಿಧಿಗಳ ಕರ್ತವ್ಯ. ಅಂತಹ ಮಾಧ್ಯಮಗಳಿಗೆ ನಿರ್ಬಂಧ ದುರಾದೃಷ್ಟಕರ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಪೀಕರ್ ಅವರಿಗೆ ಪಾರದರ್ಶಕವಾಗಿ ಸದನ ನಡೆಸುವ ಇಚ್ಛಾಶಕ್ತಿ ಇದ್ದಂತೆ ಕಾಣುತ್ತಿಲ್ಲ. ಸದನದಲ್ಲಿ ಜನಪ್ರತಿನಿಧಿಗಳು ಹೇಗೆ ಪಾಲ್ಗೊಳ್ಳುತ್ತಾರೆ, ಅವರ ನಡವಳಿಕೆಗಳೇನು? ಯಾವ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತಾರೆಂಬುದನ್ನು ಜನರು ತಿಳಿಯುವುದರಲ್ಲಿ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ ಕಸಿದುಕೊಳ್ಳುವುದು ಸರಿಯಲ್ಲ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೂಡಲೇ ತಮ್ಮ ಆದೇಶವನ್ನು ಹಿಂಪಡೆಯಬೇಕು. ಇಲ್ಲವಾದರೆ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ದಸಂಸ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ರೂಪಿಸಲಿದೆ ಎಂದು ಲಕ್ಷ್ಮೀ ನಾರಾಯಣ ನಾಗವಾರ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.