ಮಲೆನಾಡಿನಲ್ಲಿ ಮಳೆಯ ಅಬ್ಬರ: ಜನಜೀವನ ಅಸ್ತವ್ಯಸ್ತ- ಕುಸಿದ ಕಿರು ಸೇತುವೆ
ಚಿಕ್ಕಮಗಳೂರು, ಅ.18: ಜಿಲ್ಲೆಯ ಮಲೆನಾಡು ಹಾಗೂ ಬಯಲು ಸೀಮೆ ತಾಲೂಕುಗಳ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಆಗಾಗ್ಗೆ ಧಾರಾಕಾರ ಮಳೆ ಸುರಿಯುತ್ತಿದ್ದು, ಶುಕ್ರವಾರ ಮಲೆನಾಡು ಹಾಗೂ ಬಯಲುಸೀಮೆ ತಾಲೂಕುಗಳ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದೆ. ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕೆಲವೆಡೆ ಸೇತುವೆ ಕುಸಿದು, ಮರಗಳು ಧರೆಗರುಳಿದ ಘಟನೆಗಳು ಸಂಭವಿಸಿವೆ.
ಕಳೆದ ಆಗಸ್ಟ್ ನಲ್ಲಿ ತತ್ತರಿಸಿ ಹೋಗಿದ್ದ ಮಲೆನಾಡು ಇದೀಗ ಮತ್ತೆ ಧಾರಾಕಾರ ಮಳೆಯಾಗುತ್ತಿರುವುದರಿಂದ ಆತಂಕದಲ್ಲಿದ್ದಾರೆ. ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಮಳೆಯಾಗಿದ್ದು, ಸತತ ಮಳೆಯಿಂದಾಗಿ ಈ ತಾಲೂಕುಗಳಲ್ಲಿ ಜನರು ಮನೆಯಿಂದ ಹೊರಬಾರದಂತಾಗಿತ್ತು.
ಮೂಡಿಗೆರೆ ತಾಲೂಕಿನ ಹೊಯ್ಸಳ-ಮುದ್ರಾ ಗ್ರಾಮಗಳನ್ನು ಸಂಪರ್ಕಿಸುವ ಕಿರು ಸೇತುವೆಯೊಂದು ಶುಕ್ರವಾರ ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಕುಸಿದಿದ್ದು, ಪರಿಣಾಮ ಈ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಈ ಹಿಂದೆ ಸುರಿದ ಮಳೆಯಿಂದಾಗಿ ಶಿಥಲಾವಸ್ಥೆಯ ಹಂತಕ್ಕೆ ತಲುಪಿದ್ದ ಸೇತುವೆ ಶುಕ್ರವಾರ ಬೆಳಗ್ಗೆ ಭಾರೀ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ಕುಸಿದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಉಳಿದಂತೆ ಮೂಡಿಗೆರೆ ತಾಲೂಕಿನ ಕಳಸ, ಹೊರನಾಡು, ಕುದುರೆಮುಖ, ಬಣಕಲ್, ಜಾವಳಿ ಬಾಳೂರು, ಬಣಕಲ್, ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಕೆಲವೆಡೆ ಮರಗಳು ಧರೆಗೆ ಉರುಳಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದ ಘಟನೆಗಳು ವರದಿಯಾಗಿವೆ.
ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕಿನ ವ್ಯಾಪ್ತಿಯಲ್ಲಿ ಮಧ್ಯಾಹ್ನದ ವೇಳೆ ಧಾರಾಕಾರವಾಗಿ ಸುರಿದ ಮಳೆ ಸಂಜೆವರೆಗೂ ಮಳೆಯಾಗಿದ್ದು, ರಾತ್ರಿಯೂ ಮಳೆಯಾಗುವ ಸಂಭವ ಹೆಚ್ಚಿತ್ತು. ನಗರದಲ್ಲಿ ಜನರು ಹಾಗೂ ವಾಹನ ಸಂಚಾರ ಸ್ಥಬ್ಧಗೊಂಡಿತ್ತು. ರಸ್ತೆಯ ಮೇಲೆ ನೀರು ನಿಂತಿದ್ದ ದೃಶ್ಯಗಳು ನಗರದ ಪ್ರಮುಖ ರಸ್ತೆಗಳಲ್ಲಿ ಕಂಡು ಬಂದವು. ರಸ್ತೆ ಬದಿಯ ವ್ಯಾಪಾರಿಗಳು ಮಳೆಯಿಂದ ರಕ್ಷಣೆ ಪಡೆಯಲು ಹೆಣಗಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ತಾಲೂಕಿನ ಲಕ್ಯಾ, ಅಂಬಳೆ, ವಸ್ತಾರೆ, ಆಣೂರು, ಮಲ್ಲಂದೂರು ಹೋಬಳಿಗಳ ವ್ಯಾಪ್ತಿಯಲ್ಲೂ ಧಾರಾಕಾರ ಮಳೆ ಸುರಿದಿದೆ.
ಇನ್ನು ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲಿ ಬಾಳೆಹೊನ್ನೂರು, ಖಾಂಡ್ಯ, ಜಯಪುರ, ನೆಮ್ಮಾರ್, ಕಿಗ್ಗಾ, ಅಗಳಗಂಡಿ, ಬಿಜಿ ಕಟ್ಟೆ, ಹೇರೂರು, ಬಸರಿಕಟ್ಟೆ ಮತ್ತಿತರ ಗ್ರಾಮ, ಪಟ್ಟಣಗಳಲ್ಲಿ ಶುಕ್ರವಾರ ಎಡಬಿಡದೆ ಮಳೆ ಸುರಿದಿದೆ. ಉಳಿದಂತೆ ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲೂ ಧಾರಾಕಾರ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಮಳೆಯಿಂದಾಗಿ ಈ ಭಾಗದ ಹಳ್ಳಕೊಳ್ಳಗಳೂ ಸೇರಿದಂತೆ ಭದ್ರಾ, ತುಂಗಾ, ಹೇಮಾವತಿ, ಜಪಾವತಿ ನದಿಗಳಲ್ಲಿ ನೀರಿನ ಮಟ್ಟದಲ್ಲಿ ಕೊಂಚ ಏರಿಕೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ನದಿಗಳ ನೀರು ಹರಿಯಲಾರಂಭಿಸಿದೆ ಎಂದು ತಿಳಿದು ಬಂದಿದೆ. ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ವರದಿಯಾಗಿಲ್ಲ.