ವಿವಿ ವಿದ್ಯಾರ್ಥಿಗಳ ಸಹಯೋಗದಲ್ಲಿ ಗ್ರಾಮಗಳ ಅಧ್ಯಯನ: ಸಿ.ಟಿ.ರವಿ
ಧಾರವಾಡ, ಅ.23: ಧಾರವಾಡ ಜಿಲ್ಲೆಯ 359 ಕಂದಾಯ ಗ್ರಾಮಗಳೂ ಸೇರಿ ರಾಜ್ಯದ ಎಲ್ಲ ಗ್ರಾಮಗಳ ಅಧ್ಯಯನ ಕಾರ್ಯವನ್ನು ವಿಶ್ವವಿದ್ಯಾಲಯ, ಮಹಾವಿದ್ಯಾಲಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಕೈಗೊಂಡು ಗ್ರಾಮದ ಇತಿಹಾಸ, ಸಂಸ್ಕೃತಿ, ಪರಂಪರೆಯ ಸಮಗ್ರ ಮಾಹಿತಿಯನ್ನು ವಿಕಿಪೀಡಿಯ ಮಾದರಿಯಲ್ಲಿ ಅಂತರ್ಜಾಲಕ್ಕೆ ಅಳವಡಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದರು.
ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳನ್ನು ನಾಲ್ಕು ಗೋಡೆಯ ಆಚೆಗೂ ಶಿಕ್ಷಣ, ಸಂಶೋಧನೆ ಕೈಗೊಳ್ಳಲು ಅವಕಾಶ ಕಲ್ಪಿಸುವ ಆಶಯದೊಂದಿಗೆ ಬರುವ ಡಿಸೆಂಬರ್ ತಿಂಗಳಿನಲ್ಲಿ ಶನಿವಾರ ಹಾಗೂ ರವಿವಾರಗಳಂದು ವಿದ್ಯಾರ್ಥಿಗಳ ಸಹಯೋಗದಲ್ಲಿ ಈ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಗೆಜೆಟಿಯರ್ನಲ್ಲಿ ಬಿಟ್ಟು ಹೋಗಿರುವ ಅಂಶಗಳನ್ನು ಸಂಗ್ರಹಿಸಿ ವಿಕಿಪೀಡಿಯ ಮಾದರಿಯಲ್ಲಿ ಅಂತರ್ಜಾಲಕ್ಕೆ ಅಳವಡಿಸಲಾಗುವುದು, ಹಿರಿಯರು, ಅನುಭವಿಗಳು, ತಜ್ಞರು ಆ ಮಾಹಿತಿಗಳನ್ನು ಸಂಪಾದನೆ ಮಾಡಲು ಅವಕಾಶ ಕಲ್ಪಿಸಲಾಗುವುದು ಎಂದು ಸಿ.ಟಿ.ರವಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ, ಗಂಗೂಬಾಯಿ ಹಾನಗಲ್ ಸ್ಮಾರಕ, ಪ್ರವಾಸೋದ್ಯಮ ಇಲಾಖೆ ಹಾಗೂ ಧಾರವಾಡದಲ್ಲಿರುವ ಟ್ರಸ್ಟುಗಳ ಕಾರ್ಯಚಟುವಟಿಕೆಗಳನ್ನು ಇದೇ ಅವರು ಪರಿಶೀಲನೆ ನಡೆಸಿದರು.
ಧಾರವಾಡದಲ್ಲಿರುವ ಥ್ಯಾಕರೆ ಸಮಾಧಿ ಸೇರಿದಂತೆ ಜಿಲ್ಲೆಯಲ್ಲಿ ಸಂರಕ್ಷಣೆಯ ಅಗತ್ಯವಿರುವ ಸಮಗ್ರ ಪಾರಂಪರಿಕ ಸ್ಥಳಗಳ ಅಭಿವೃದ್ಧಿಗೆ ಯೋಜನೆ ಮತ್ತು ಅಂದಾಜು ವೆಚ್ಚದ ಪ್ರಸ್ತಾವನೆ ಸಲ್ಲಿಸಬೇಕು. ಮತ್ತು ಖ್ಯಾತ ಹಿಂದೂಸ್ತಾನಿ ಗಾಯಕಿ ಡಾ.ಗಂಗೂಬಾಯಿ ಹಾನಗಲ್ ಹುಟ್ಟಿದ ಮನೆಯನ್ನು ಜೀರ್ಣೋದ್ಧಾರ ಮಾಡಿ ಆಸಕ್ತರಿಗೆ ನಿರ್ವಹಣೆಗಾಗಿ ದತ್ತು ನೀಡಲು ಯೋಜನೆ ರೂಪಿಸಬೇಕೆಂದು ಅವರು ತಿಳಿಸಿದರು. ರಾಜ್ಯ ಪ್ರವಾಸೋದ್ಯಮ ಪಟ್ಟಿಯಲ್ಲಿ ಜಿಲ್ಲೆಯ 4 ಪ್ರವಾಸಿ ಸ್ಥಳಗಳಿದ್ದು, 2ಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರೊಂದಿಗೆ ಚರ್ಚಿಸಿ, ಜಿಲ್ಲೆಯ ಜನಪ್ರತಿನಿಧಿಗಳ, ಅನುಭವಿಗಳ ಸಭೆ ಜರುಗಿಸಿ ಹೆಚ್ಚಿನ ಸ್ಥಳಗಳನ್ನು ರಾಜ್ಯ ಪ್ರವಾಸೋದ್ಯಮ ಪಟ್ಟಿಗೆ ಸೇರಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಜಿಲ್ಲೆಯ ಜನಪ್ರತಿನಿಧಿಗಳು, ತಜ್ಞರು, ಸಾರ್ವಜನಿಕರನ್ನೊಳಗೊಂಡ ಜಿಲ್ಲಾ ಪ್ರವಾಸೋದ್ಯಮ ಸಮಿತಿಯನ್ನು ಪುನರ್ ರಚಿಸಬೇಕು. ಜಿಲ್ಲೆಯ ಸಾಂಸ್ಕೃತಿಕ ಹಿನ್ನೆಲೆ ಬಿಂಬಿಸುವ 2020ರ ಕ್ಯಾಲೆಂಡರ್ ಅನ್ನು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ರೂಪಿಸುವಂತೆ ಅವರು ತಿಳಿಸಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಜಿಲ್ಲೆಯ ಅನೇಕ ಪ್ರವಾಸಿ ತಾಣಗಳಿಗೆ ಹೆಚ್ಚಿನ ಮೂಲಸೌಕರ್ಯಗಳ ಅಗತ್ಯವಿದೆ. ಥ್ಯಾಕರೆ ಸಮಾಧಿ, ಕೆಲಗೇರಿ ಕೆರೆ, ಧಾರವಾಡ ಕೋಟೆ ಸೇರಿದಂತೆ ಪ್ರಮುಖ ಸ್ಥಳಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯಾಗಬೇಕೆಂದು ಹೇಳಿದರು.
ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಪ್ರವಾಸೋದ್ಯಮ ಪ್ರೋತ್ಸಾಹ ದೃಷ್ಟಿಯಿಂದ ಜಿಲ್ಲೆಯ 62 ಪ್ರಮುಖ ಐತಿಹಾಸಿಕ ಮತ್ತು ಪಾರಂಪರಿಕ ಸ್ಥಳಗಳನ್ನು ಗುರುತಿಸಲಾಗಿದೆ. ಜಿಲ್ಲೆಯ ಪ್ರವಾಸ ತಾಣ, ಕಲೆ, ಸಾಹಿತ್ಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಬಿಂಬಿಸುವ ಕಾಪಿಟೇಬಲ್ ಪುಸ್ತಕವನ್ನು ಬರುವ ನವೆಂಬರ್ನಲ್ಲಿ ಪ್ರಕಟಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಸಿಇಓ ಡಾ.ಬಿ.ಸಿ.ಸತೀಶ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ, ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ನ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ, ರಾಜ್ಯ ಪತ್ರಗಾರ ಇಲಾಖೆಯ ನಿರ್ದೇಶಕ ಸಿ.ಗಂಗಾಧರಯ್ಯ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.