ಜಮೀನಿನಲ್ಲಿ ಹೊಂಡಕ್ಕೆ ಬಿದ್ದು ರೈತ ಸಾವು
ದಾವಣಗೆರೆ, ಅ.29: ಎತ್ತುಗಳಿಗೆ ನೀರು ಕುಡಿಸಲೆಂದು ಹೋಗಿದ್ದ ರೈತನೊಬ್ಬ ಆಕಸ್ಮಿಕವಾಗಿ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಮಂಗಳವಾರ ಜಿಲ್ಲೆಯ ನ್ಯಾಮತಿ ತಾಲೂಕು ಕತ್ತಿಗೆ ಗ್ರಾಮದ ಸಮೀಪ ವರದಿಯಾಗಿದೆ.
ಜೀನಹಳ್ಳಿ ಗ್ರಾಮದ ಕರಿಯಪ್ಪ(44) ಮೃತ ರೈತ. ಇವರು ಸೋಮವಾರ ಮಧ್ಯಾಹ್ನ ಎತ್ತುಗಳನ್ನು ಮೇಯಿಸುತ್ತಾ ಕತ್ತಿಗೆ ಗ್ರಾಮದ ಸಮೀಪವಿರುವ ತಮ್ಮ ಜಮೀನಿನ ಹತ್ತಿರದ ನೀರಿನ ಹೊಂಡಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಗುಂಡಿಯಲ್ಲಿ ಬಿದ್ದು, ಈಜು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story