ಬಿಜೆಪಿ ಒಂದು ಜಾತಿಗೆ ಸೀಮಿತವಾದ ಪಕ್ಷವಲ್ಲ: ಡಾ.ಅಶ್ವಥ್ ನಾರಾಯಣ
ಮಂಡ್ಯ, ನ.21: ಬಿಜೆಪಿ ಒಂದು ಜಾತಿಗೆ ಸೀಮಿತವಾದ ಪಕ್ಷವಲ್ಲ. ಎಲ್ಲಾ ವರ್ಗದ ಜನ ನಾಯಕ ಯಡಿಯೂರಪ್ಪ. ಬಿಎಎಸ್ವೈಗೆ ಮಂಡ್ಯ ಜನರ ಮೇಲೆ ವಿಶೇಷ ಕಾಳಜಿ ಇದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಕೆ.ಆರ್.ಪೇಟೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಪರ ಪ್ರಚಾರ ಮಾಡಿದ ಅವರು, ನಾರಾಯಣಗೌಡ ಕ್ಷೇತ್ರದ ಅಭಿವೃದ್ಧಿ, ಸ್ವಾಭಿಮಾನಕ್ಕಾಗಿ ರಾಜೀನಾಮೆ ಕೊಟ್ಟಿದ್ದಾರೆ. ಜಾತಿ ಮೀರಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.
ಹೊಸಕೋಟೆ ಉಸ್ತುವಾರಿಯಿಂದ ಹಿಂದೆ ಸರಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲಿಂದಲೂ ಹಿಂದೆ ಸರಿದಿಲ್ಲ. ಪಕ್ಷ ಜವಾಬ್ದಾರಿ ಕೊಟ್ಟಿದೆ. ಅದನ್ನ ನಿಭಾಯಿಸಲು ಬಂದೆದ್ದೇನೆ. ಯಾವ ಡ್ಯಾಮೇಜ್ ಕಂಟ್ರೋಲ್ ಗೂ ನಾನು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಸುದ್ದಿಗಾರರ ಜತೆ ಮಾತನಾಡಿ, ನಾರಾಯಣಗೌಡರಿಂದ ಬಿಜೆಪಿಗೆ ಶಕ್ತಿ ಬಂದಿದೆ. ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆ.ಆರ್.ಪೇಟೆಯಲ್ಲಿ ಕಮಲ ಅರಳುವ ವಿಶ್ವಾಸ ಇದೆ ಎಂದರು.
ಹೆಚ್ಡಿಕೆಯನ್ನ, ಸದಾನಂದಗೌಡರನ್ನ ಸಿಎಂ ಮಾಡಿದ್ದು ಯಡಿಯೂರಪ್ಪ. ಆರ್.ಅಶೋಕ್, ಅಶ್ವಥ್ ನಾರಾಯಣಗೌಡರನ್ನ ಡಿಸಿಎಂ ಮಾಡಿದ್ದು ಕೂಡ ಬಿಎಸ್ವೈ. ನೈತಿಕತೆ ಬಗ್ಗೆ ಬೇರೆಯವರಿಂದ ಬಿಎಸ್ವೈ ಪಾಠ ಕಲಿಯಬೇಕಿಲ್ಲ. ಯಡಿಯೂರಪ್ಪ ಅಂದ್ರೆ ಅಭಿವೃದ್ಧಿ, ಅಭಿವೃದ್ಧಿ ಅಂದ್ರೆ ಯಡಿಯೂರಪ್ಪ ಎಂದು ಅವರು ಹೇಳಿದರು.