ಬಳ್ಳಾರಿ: ಪತ್ನಿ ಸೇರಿ ಐವರನ್ನು ಹತ್ಯೆಗೈದ ಆರೋಪಿಗೆ ಗಲ್ಲು
ಬಳ್ಳಾರಿ, ಡಿ.4: ಪತ್ನಿ ಸೇರಿ ಐವರನ್ನು ಕೊಲೆಗೈದಿದ್ದ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಇಲ್ಲಿನ 3ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಬುಧವಾರ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಅವರು ಈ ಆದೇಶ ನೀಡಿದ್ದು, ಕಂಪ್ಲಿಯ ಚಪ್ಪರದಹಳ್ಳಿ ನಿವಾಸಿ ಬೈಲೂರು ತಿಪ್ಪಯ್ಯ ಮಲ್ಲಪ್ಪ ಎಂಬಾತ ಶಿಕ್ಷೆಗೊಳಪಟ್ಟಿರುವ ಅಪರಾಧಿ.
2017ರ ಫೆ.25ರಂದು ಮಲ್ಲಪ್ಪ ತನ್ನ ಪತ್ನಿ ಫಕೀರಮ್ಮ, ಮಕ್ಕಳಾದ ನಾಗರಾಜ, ಪವಿತ್ರ, ಬಸಮ್ಮ ಹಾಗೂ ಮಡದಿಯ ಸಹೋದರಿ ಗಂಗಮ್ಮಳ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೈದಿದ್ದ ಎನ್ನಲಾಗಿದ್ದು, ಈ ಸಂಬಂಧ ಕಂಪ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ತಿಳಿದುಬಂದಿದೆ.
ಪತ್ನಿಯ ಶೀಲ ಶಂಕಿಸಿ ಈ ಕೃತ್ಯವೆಸಗಿದ್ದ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 51 ದಾಖಲೆ, 36 ಜನ ಸಾಕ್ಷಿ ವಿಚಾರಣೆ ನಡೆಸಿದ ಸಿಪಿಐ ಸಿದ್ದೇಶ್ವರ, ಪಿಎಸ್ಸೈ ನಿರಂಜನ್ ನೇತೃತ್ವದ ತಂಡ ತನಿಖೆ ನಡೆಸಿ, ಚಾರ್ಜ್ಶೀಟ್ ಸಲ್ಲಿಕೆ ಮಾಡಿತ್ತು. ಸರಕಾರಿ ಅಭಿಯೋಜಕ ಎಂ.ಬಿ. ಸುಂಕಣ್ಣ ವಾದ ಮಂಡಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶರು, ಹತ್ಯೆಗೈದಿರುವುದು ಸಾಬೀತು ಆಗಿದ್ದು, ತಿಪ್ಪಯ್ಯ ಮಲ್ಲಪ್ಪಗೆ ಶಿಕ್ಷೆ ಪ್ರಕಟಿಸಿದ್ದಾರೆ.