ಪೌರತ್ವದ ನೆಪದಲ್ಲಿ ಬಿಜೆಪಿ ದೇಶವನ್ನು ವಿಭಜಿಸಲು ಹೊರಟಿದೆ: ಸಿದ್ದರಾಮಯ್ಯ
ಬೆಂಗಳೂರು, ಡಿ.10: ಧರ್ಮದ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸಲು ಹೊರಟಿರುವ ಬಿಜೆಪಿ ದೇಶವನ್ನು ವಿಭಾಗ ಮಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ದೇಶದಲ್ಲಿ ಜಿಡಿಪಿ ದರ ಕುಸಿತ, ನಿರುದ್ಯೋಗ ಸಮಸ್ಯೆ ಹೆಚ್ಚಳ, ಬೆಲೆ ಏರಿಕೆ, ಕೈಗಾರಿಕೆಗಳು ಮುಚ್ಚುತ್ತಿರುವುದು, ಬ್ಯಾಂಕ್ಗಳು ದಿವಾಳಿಯಾಗುತ್ತಿವೆ. ಇಂತಹ ಗಂಭೀರ ವಿಷಯಗಳನ್ನು ಮರೆಮಾಚಲು ಪೌರತ್ವ ಮಸೂದೆಯ ಅಸ್ತ್ರ ಬಳಸಲು ಬಿಜೆಪಿ ಹೊರಟಿದೆ ಎಂದು ಆರೋಪಿಸಿದ್ದಾರೆ. ಧರ್ಮದ ಆಧಾರದಲ್ಲಿ ದೇಶ ಒಡೆಯಲು ಹೊರಟಿರುವ ಬಿಜೆಪಿ ವಿರುದ್ಧ ಜಾತ್ಯತೀತ ಭಾರತ ಸಂಘಟಿತವಾಗಬೇಕು. ಮಸೂದೆಯಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಕೊಂಡಿರುವ ದುರುದ್ದೇಶ ಇದೆಯೇ ಹೊರತು ವಲಸೆ ಸಮಸ್ಯೆಯನ್ನು ಪರಿಹರಿಸುವ ಸದುದ್ದೇಶ ಇಲ್ಲ ಎಂದು ಅವರು ಹೇಳಿದ್ದಾರೆ.
ಮಧ್ಯರಾತ್ರಿ ಲೋಕಸಭೆ ಅಂಗೀಕರಿಸಿದ ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನದ ಮೂಲ ಆಶಯಗಳಾದ ಸಮಾನತೆ ಮತ್ತು ಜಾತ್ಯತೀತತೆಯನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಮಸೂದೆ ಧರ್ಮದ ಆಧಾರದಲ್ಲಿ ದೇಶ ಒಡೆಯುವ ಬಿಜೆಪಿಯ ಗುಪ್ತ ಅಜೆಂಡಾದ ಭಾಗವಾಗಿದೆ ಎಂದು ಅವರು ಆರೋಪಿಸಿದ್ದಾರೆ.