ಕೆಪಿಸಿಸಿ ಪಟ್ಟಕ್ಕಾಗಿ ಓಲೈಕೆ: ಬಿ.ವೈ.ವಿಜಯೇಂದ್ರ
ಬೆಂಗಳೂರು, ಡಿ. 28: ‘ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಹೈಕಮಾಂಡ್ ಓಲೈಕೆ ಅಸ್ತ್ರವಾಗಿ ಏಸುವನ್ನು ಬಳಸಿಕೊಳ್ಳುತ್ತಿರುವ ನಿಮ್ಮ ನಡೆ, ನಾಡಿನ ಸಂಸ್ಕೃತಿ, ಇತಿಹಾಸಕ್ಕೆ ಬಗೆಯುತ್ತಿರುವ ಐತಿಹಾಸಿಕ ಅಪಚಾರವಾಗಿದೆ’ ಎಂದು ಬಿಎಸ್ವೈ ಅವರ ಪುತ್ರ ಹಾಗೂ ಬಿಜೆಪಿ ಯುವ ಮೋರ್ಚಾ ಮುಖಂಡ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಸ್ಥಳ ಮಹಿಮೆಯ ಹಿನ್ನೆಲೆಯಲ್ಲಿ ಪ್ರತಿಮೆ, ಸ್ಮಾರಕಗಳ ನಿರ್ಮಾಣವಾಗುತ್ತದೆ. ಏಷ್ಯಾದಲ್ಲೇ ಎತ್ತರದ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣದ ಸ್ಥಳ ಮಹಿಮೆ ಹಿನ್ನಲೆ ಏನು?’ ಎಂದು ಇದೇ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.
‘ಶಿವಕುಮಾರ್ರವರೇ, ಕೆಪಿಸಿಸಿ ಅಧ್ಯಕ್ಷ ಪಟ್ಟದಲ್ಲಿ ಕುಳಿತುಕೊಳ್ಳಲು ಈ ಪರಿಯಲ್ಲಿ ನಿಮ್ಮ ಹೈಕಮಾಂಡ್ ಓಲೈಸಬೇಕೇ? ಕೆಂಪೇಗೌಡರ ನೆಲದ ಹೆಗ್ಗಳಿಕೆಯ ಇತಿಹಾಸದ ಮೇಲೆ ಅಟ್ಟಹಾಸ ಮೆರೆದು ಕನ್ನಡನಾಡಿನ ವೈಭವದ ಸಂಸ್ಕೃತಿಗೆ ಧಕ್ಕೆತರುವ ಐತಿಹಾಸಿಕ ಪ್ರಮಾದ ಮಾಡುತ್ತಿದ್ದೀರಿ. ಇದಕ್ಕೆ ರಾಹುಲ್, ಸೋನಿಯಾ ಬೆನ್ನು ತಟ್ಟಬಹುದು, ಜನತೆ ಕ್ಷಮಿಸುವರೇ?’ ಎಂದು ವಿಜಯೇಂದ್ರ ಟೀಕಿಸಿದ್ದಾರೆ.