ಎಸ್ಡಿಪಿಐ ನಿಷೇಧಿಸುವ ಸರಕಾರ ಚಿಂತನೆಗೆ ವಿರೋಧ
ಬೆಂಗಳೂರು, ಡಿ.31: ಪೌರತ್ವ (ತಿದ್ದುಪಡಿ) ಕಾಯಿದೆ, ಎನ್ಆರ್ಸಿ ಕಾಯ್ದೆಗಳನ್ನು ವಿರೋಧಿಸುತ್ತಿರುವ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ -ಕರ್ನಾಟಕ ಸೇರಿದಂತೆ ಅನೇಕ ಸಂಘಟನೆಗಳನ್ನು ನಿಷೇಧಿಸುವ ಬಗ್ಗೆ ರಾಜ್ಯ ಸರಕಾರ ಕೇಂದ್ರ ಸರಕಾರದ ಜತೆ ಮಾತುಕತೆ ನಡೆಸುತ್ತಿದ್ದು, ಇದು ಸಂವಿಧಾನ ವಿರೋಧಿಯಾಗಿದೆ. ರಾಜ್ಯ ಸರಕಾರ ಇದನ್ನು ಈ ಕೂಡಲೇ ಕೈಬಿಡಬೇಕು ಎಂದು ರಿಪಬ್ಲಿಕನ್ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಆರ್.ಮೋಹನ್ರಾಜು ಆಗ್ರಹಿಸಿದ್ದಾರೆ.
ಮಂಗಳವಾರ ಪ್ರೆಸ್ಕ್ಲಬ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಡಿಪಿಐ ಪಕ್ಷವನ್ನು ನಿಷೇಧಿಸಬೇಕು, ಇದರಿಂದಲೇ ಕೋಮು ಗಲಭೆಗಳು ಹೆಚ್ಚುತ್ತಿವೆ ಎಂದು ರಾಜ್ಯ ಸರಕಾರ ಆಪಾದನೆ ಮಾಡುತ್ತಿದೆ. ಆದರೆ, ಸಂವಿಧಾನಬದ್ಧವಾಗಿ ರಾಷ್ಟ್ರೀಯ ಚುನಾವಣಾ ಆಯೋಗದಿಂದ ನೋಂದಾವಣಿ ಹೊಂದಿರುವ ರಾಜಕೀಯ ಪಕ್ಷ, ಸಂಘಟನೆಯನ್ನು ನಿಷೇಧಿಸುವ ಅಧಿಕಾರ ಯಾರಿಗೂ ಇಲ್ಲ. ಈ ಕೂಡಲೇ ರಾಜ್ಯ ಸರಕಾರ ತನ್ನ ನಿಲುವು ಬದಲಿಸಬೇಕು ಎಂದು ಒತ್ತಾಯಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಗೆ ನಮ್ಮ ಪಕ್ಷದ ವಿರೋಧವಿದೆ. ಜಾತಿ, ಧರ್ಮವನ್ನು ಎಳೆದು ತರುವ ಇಂತಹ ನೀತಿಗಳ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಎಂ.ಸಿ.ನಾರಾಯಣ್, ಸಿದ್ಧಪ್ಪ ಉಪಸ್ಥಿತರಿದ್ದರು.