ಬೇಕರಿಯಲ್ಲಿ ಅಗ್ನಿ ಅನಾಹುತ: 3 ಮಹಿಳೆಯರು ಸೇರಿ ಏಳು ಮಂದಿಗೆ ಗಾಯ
ದಾವಣಗೆರೆ, ಜ.4: ಇಲ್ಲಿನ ಎವಿಕೆ ರಸ್ತೆಯಲ್ಲಿರುವ ಆಹಾರ ಕೇಕ್ ಬೇಕರಿಯಲ್ಲಿ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಅನಾಹುತ ಸಂಭವಿಸಿ ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿಗೆ ಗಾಯವಾಗಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಜಯಮ್ಮ ಮತ್ತು ರವಿಕುಮಾರ್ ಸ್ಥಿತಿ ಗಂಭೀರವಾಗಿದ್ದು, ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ರಾಜು, ರೇಖಾ, ಅಬ್ಜದ್ ಖಾನ, ನಾಗರಾಜ ಗಾಯಗೊಂಡಿರುವ ಸಿಬ್ಬಂದಿಗಳು. ಇವರಿಗೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.
ಸಿಲಿಂಡರ್ ಸೋರಿಕೆಯಿಂದ ಬೇಕರಿಯ ಮೊದಲ ಮಹಡಿಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆ ಬೇಕರಿ ಪೂರ್ತಿ ವ್ಯಾಪಿಸಿದೆ. ನಂತರ ಅದು ಕೆಳ ಮಹಡಿಗೂ ವ್ಯಾಪಿಸಿದ್ದು, ಈ ವೇಳೆ ಕಾರ್ಮಿಕರು ಹೊರಬರಲಾರದೆ ಒದ್ದಾಡಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಎರಡು ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಸಿದರು.
ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.