'ಸಾಗರಮಾಲಾ ಯೋಜನೆ'ಗೆ ಭಾರೀ ವಿರೋಧ: ಕಾರವಾರದಲ್ಲಿ ಮೀನುಗಾರಿಕೆ ಸಂಪೂರ್ಣ ಬಂದ್
ಕಾರವಾರ, ಜ.20: ಉತ್ತರ ಕನ್ನಡ ಜಿಲ್ಲೆಯ ಮುಖ್ಯ ಉದ್ಯೋಗಳಲ್ಲಿ ಒಂದಾಗಿರುವ ಮೀನುಗಾರಿಕೆ ಉದ್ಯೋಗ ಕಳೆದ ಐದು ದಿನಗಳಿಂದ ಕಾರವಾರದಲ್ಲಿ ಸಂಪೂರ್ಣ ಬಂದ್ ಆಗಿದ್ದರಿಂದ ಸ್ಥಳೀಯ ಮೀನುಗಾರರು ಬೀದಿಗೆ ಬೀಳುವಂತಾಗಿದೆ.
ಕೇಂದ್ರ ಸರಕಾರ ಸಾಗರಮಾಲಾ ಯೋಜನೆಯಡಿ ಬಂದರು ವಿಸ್ತರಣೆಗೆ ಮುಂದಾಗಿದೆ. ಈ ಯೋಜನೆಗೆ ಇಲ್ಲಿನ ಸ್ಥಳೀಯರು ಹಾಗೂ ಮೀನುಗಾರರು ವಿರೋಧ ವ್ಯಕ್ತಪಡಿಸಿ ಕಳೆದ ಕೆಲವು ದಿನಗಳಿಂದ ಕಾರವಾರ ಕಡಲ ತೀರವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ತೀವ್ರ ಹೋರಾಟ ನಡೆಸುತ್ತಿದ್ದಾರೆ.
ಕಾರವಾರದ ಜಿಲ್ಲಾಧಿಕಾರಿ ಕಚೇರಿ ಬಳಿ ಕಳೆದ ಒಂದು ವಾರದಿಂದ ಮೀನುಗಾರರು ಮೀನುಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಧರಣಿ ನಡೆಸುತ್ತಿದ್ದು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಕಾರವಾರದ ಬೈತಖೋಲ್ ಮೀನುಗಾರಿಕಾ ಜಟ್ಟಿಯಿಂದ ನಿತ್ಯ 300ಕ್ಕೂ ಹೆಚ್ಚು ಬೋಟುಗಳು ಇಲ್ಲಿನ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುತ್ತವೆ. ಆದರೆ ಸಾಗರಮಾಲಾ ಯೋಜನೆಯನ್ನು ಇಲ್ಲಿನ ಕಡಲತೀರದಲ್ಲಿ ತರುವುದರಿಂದ ಸ್ಥಳೀಯ ಮೀನುಗಾರರಿಗೆ ಭವಿಷ್ಯದಲ್ಲಿ ಮೀನುಗಾರಿಕೆಗೆ ತೊಂದರೆಯಾಗಲಿದೆ ಎನ್ನುವ ಕಾರಣದಿಂದ ಹಾಗೂ ಸಾಂಪ್ರದಾಯಿಕ ಮೀನುಗಾರಿಕೆಗೆ ತೊಂದರೆಯಾಗಲಿದೆ ಎನ್ನುವ ದೃಷ್ಟಿಯಿಂದ ವಿರೋಧ ವ್ಯಕ್ತವಾಗಿದೆ.
ಕಾರವಾರದ ಆಳ ಸಮುದ್ರದಲ್ಲಿ ಹಿಡಿಯುವ ಮೀನು ಪಕ್ಕದ ಗೋವಾ, ಸೇರಿದಂತೆ ಮಂಗಳೂರು, ಜಿಲ್ಲೆಯ ವಿವಿಧ ತಾಲೂಕಿನ ಮೀನು ಮಾರುಟ್ಟೆಗೆ ಸಾಗಿಸಲಾಗುತ್ತಿದೆ. ಆದರೆ ಕಾರವಾರದಲ್ಲಿ ಮೀನುಗಾರಿಕೆಯೇ ಸಂಪೂರ್ಣ ಬಂದ್ ಆಗಿದ್ದರಿಂದ ಇಲ್ಲಿನ ಜನರಿಗೂ ತಾಜಾ ಮೀನು ಇಲ್ಲದಂತಾಗಿದೆ. ಇಲ್ಲಿನ ಮೀನುಗಾರಿಕಾ ಜಟ್ಟಿಯಲ್ಲೇ ಬೋಟುಗಳು ಲಂಗರು ಹಾಕಿವೆ.
ಕರಾವಳಿಯ ಭಟ್ಕಳ, ಹೊನ್ನಾವರ, ಕುಮಟಾ ಹಾಗೂ ಅಂಕೋಲಾದಲ್ಲಿ ಹಿಡಿಯಲಾಗುವ ಮೀನಿನ ದರವೂ ನಾಲ್ಕು ಪಟ್ಟು ಹೆಚ್ಚಾಗಿದ್ದು ಜನರು ಹೆಚ್ಚಿನ ಮೊತ್ತ ನೀಡಿ ಮೀನು ಖರೀದಿ ಮಾಡುವಂತಾಗಿದೆ. ನಿತ್ಯವೂ ತಾಜಾ ಮೀನಿನ ಖಾಧ್ಯಗಳನ್ನು ಸವಿಯುತ್ತಿದ್ದ ಕಾರವಾರದ ಜನರಿಗೆ ಈಗ ಮೀನಿನ ಬರ ಉಂಟಾಗಿದ್ದು ಮೀನಿಗಾಗಿ ಅಲೆದಾಡುವಂಥ ಸ್ಥಿತಿ ನಿರ್ಮಾಣವಾಗಿದೆ.
ಬಂದರು ವಿಸ್ತರಣೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕಾರವಾರ ತಾಲೂಕಿನ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ಸ್ಥಗಿತಗೊಳಿಸಿದ್ದಾರೆ. ಯಾಂತ್ರಿಕ ಮೀನುಗಾರಿಕೆ ಸೇರಿದಂತೆ ಸಾಂಪ್ರದಾಯಿಕ ಮೀನುಗಾರಿಕೆಗೂ ಅವಕಾಶ ನೀಡದೇ ಮೀನುಗಾರರು ರಜೆ ಘೋಷಿಸಿದ್ದರಿಂದ ಮೀನು ಮಾರುಕಟ್ಟೆಗಳು ಖಾಲಿಯಾಗಿದ್ದು, ನಗರ ಪ್ರದೇಶದಿಂದ ವಾಹನಗಳಲ್ಲಿ ಗ್ರಾಮೀಣ ಭಾಗಕ್ಕೆ ಸಾಗಿಸಲಾಗುತ್ತಿದ್ದ ಮೀನುಗಳ ವ್ಯಾಪಾರವೂ ಸಂಪೂರ್ಣವಾಗಿ ನಿಂತಿದೆ. ಹೀಗಾಗಿ ಹೋಟೆಲ್ ಗಳಲ್ಲಿ ಮೀನುಗಳಿಗೆ ಬರ ಉಂಟಾಗಿದೆ. ಮೀನಿನ ಖಾದ್ಯ ಪದಾರ್ಥಗಳಿಗೆ ಬೇಡಿಕೆ ಇದ್ದರೂ ಕೂಡ ಮೀನಿನ ಪದಾರ್ಥಗಳ ಸಿದ್ದ ಮಾಡಲಾಗುತ್ತಿಲ್ಲ. ಇನ್ನೂ ಕೆಲ ಹೋಟೆಲ್ ಗಳಲ್ಲಿ ಮೀನು ಊಟವನ್ನೇ ಕೊಡುತ್ತಿಲ್ಲ. ಇದ್ದರೂ ಈ ಮೊದಲಿಗಿಂತ ಹೆಚ್ಚಿನ ದರಗಳಲ್ಲಿ ಮೀನೂಟ ಮಾರಾಟವಾಗುತ್ತಿದೆ.
ಕಳೆದ ಐದು ದಿನಗಳಿಂದ ಇಲ್ಲಿನ ಜನರು ಅಂಕೋಲಾದ ಮೀನು ಮಾರುಕಟ್ಟೆಯಿಂದ ಮೀನು ಖರೀದಿ ಮಾಡಿ ತರುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದು ಅಲ್ಲೂ ಸಹ ಮೀನಿನ ದರ ನಾಲ್ಕು ಪಟ್ಟು ಹೆಚ್ಚಿದೆ. ಆದರೂ ಸಹ ಅಂಕೋಲಾ ಮೀನು ಮಾರುಕಟ್ಟೆಯಲ್ಲಿ ಜನರು ಮೀನಿಗಾಗಿ ಮುಗಿ ಬಿಳುತ್ತಿದ್ದಾರೆ. ಅದು ಸಹ ಬೆಳಗ್ಗೆಯ ಅವಧಿಯಲ್ಲೇ ಮೀನು ಖಾಲಿಯಾಗುತ್ತಿದೆ. ಅಲ್ಲದೆ ಕೆಲವರು ಅಂಕೋಲಾದಿಂದ ಮೀನು ಖರೀದಿಸಿ ಕಾರವಾರಕ್ಕೆ ತಂದು ಕಾಳಸಂತೆಯಲ್ಲಿ ಮಾರಾಟ ಮಾಡುವ ರೀತಿಯಲ್ಲಿ ವ್ಯಾಪಾರ ಮಾಡುತ್ತಿದ್ದು, ಜನರು ಹೆಚ್ಚಿನ ಹಣ ನೀಡಿ ಖರೀದಿ ಮಾಡುತ್ತಿದ್ದಾರೆ.
ಹೊಟೇಲ್ನಲ್ಲೂ ಮೀನಿಗೆ ಬರ:
ಕಾರವಾರದ ಭಾಗಶಃ ಹೊಟೇಲ್ಗಳು ಮೀನೂಟಕ್ಕೆ ಖ್ಯಾತಿ ಪಡೆದುಕೊಂಡಿದೆ. ಪ್ರವಾಸಕ್ಕೆ ಬರುವರು ಇಲ್ಲಿನ ವಿವಿಧ ಮೀನಿನ ಖಾದ್ಯಗಳನ್ನು ಸವಿದೆ ತೆರಳುತ್ತಾರೆ. ಆದರೆ ಸಾಗರಮಾಲಾ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಮೀನುಗಾರಿಕೆ ಸ್ಥಗಿತಗೊಳಿಸಿದ ಪರಿಣಾಮ ಹೋಟೆಲ್ ಗಳಲ್ಲಿ ತಾಜಾ ಮೀನುಗಳ ಪದಾರ್ಥ ದೊರಕುತ್ತಿಲ್ಲ. ಕೆಲ ಮಾಂಸಹಾರಿ ಹೋಟೆಲ್ಗಳಲ್ಲಿ ಮೀನೂಟ ಈಗಾಗಲೇ ಬಂದ್ ಮಾಡಲಾಗಿದ್ದು, ಇದ್ದರೂ ಸಹ ಬೆಲೆ ಗಗನಕ್ಕೇರಿದೆ. ಡಿಸೆಂಬರ್ ತಿಂಗಳಿಂದ ಜೂನ್ ವರೆಗೂ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಮೀನು ಲಭ್ಯವಾಗುವ ದಿನವಾಗಿದೆ. ಈ ಅವಧಿಯಲ್ಲಿ ಮೀನಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಈ ಬಾರಿ ಮೀನುಗಳ ವ್ಯಾಪಾರ ಸ್ಥಗಿತಗೊಂಡಿರುವ ಕಾರಣ ಪ್ರವಾಸಿಗರು ನಿರಾಶರಾಗಿ ಗೋವಾದತ್ತ ಸಾಗುತ್ತಿದ್ದಾರೆ. ಇದರಿಂದ ಕಾರವಾರದಲ್ಲಿ ಪ್ರವಾಸೋದ್ಯಮ ಕುಂಟಿತವಾಗಿದೆ ಎನ್ನಲಾಗುತ್ತಿದೆ.
ಮಾಂಸ, ಮೊಟ್ಟೆಯೂ ದುಬಾರಿ:
ಒಂದು ವಾರದಿಂದ ಮೀನು ಇಲ್ಲದಿರುವುದರಿಂದ ತಾಲೂಕಿನಾದ್ಯಂತ ಮೊಟ್ಟೆ, ಮಾಂಸದ ಬೆಲೆಯೂ ಹೆಚ್ಚಿದೆ. ಜನರು ಮೊಟ್ಟೆ ಖರೀದಿಗಾಗಿ ಮುಗಿ ಬೀಳುವಂತಾಗಿದೆ. ಪ್ರತಿದಿನವೂ ಜನರಿಂದ ತುಂಬಿ ತುಳುಕುತ್ತಿದ್ದ ನಗರದ ಮೀನು ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ ಮೌನದ ವಾತಾವರಣ ನಿರ್ಮಾಣವಾಗಿದೆ. ಮೀನು ಮಾರಾಟ ಮಾಡುವ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೂ ಎಷ್ಟು ದಿನ ಧರಣಿ ಮುಂದುವರಿಯಲಿದೆ ಎನ್ನುವುದು ತಿಳಿಯುತ್ತಿಲ್ಲ. ಮೀನುಗಾರಿಕೆ ಬಂದ್ ಆಗಿದ್ದರಿಂದ ಜನರು ತೊಂದರೆ ಅನುಭವಿಸುತ್ತಿರುವುದು ಖಾತ್ರಿಯಾಗಿದ್ದು, ಕಾರವಾರದ ಮೀನು ಮಾರುಕಟ್ಟೆ ಮಾತ್ರವಲ್ಲದೆ, ಬೈತಖೋಲ್ ಮೀನುಗಾರಿಕಾ ಜಟ್ಟಿ, ಮುದುಗಾ ಮೀನುಗಾರಿಕೆ ಬಂದರು ಚಟುವಟಿಕೆ ಇಲ್ಲದೆ ಖಾಲಿಯಾಗಿದೆ.