ಶೀಘ್ರ ತನಿಖೆಯಾಗದಿದ್ದರೆ ಪೊಲೀಸರು ಬೇರೆ ಕತೆ ಕಟ್ಟುವ ಸಾಧ್ಯತೆ ಇದೆ: ಕುಮಾರಸ್ವಾಮಿ
ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಸ್ಫೋಟಕ' ಪತ್ತೆ ಪ್ರಕರಣ
ಚಿಕ್ಕಮಗಳೂರು, ಜ.20: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಸಿಕ್ಕಿದೆ ಎಂಬ ಮಾಹಿತಿ ಬಂದಿದ್ದು, ವಿಮಾನ ನಿಲ್ದಾಣದಲ್ಲಿ ಸಿಸಿ ಕ್ಯಾಮರಾಗಳಿರುವುದರಿಂದ ಯಾರು ಅಲ್ಲಿ ಬಾಂಬ್ ಇಟ್ಟಿದ್ದಾರೆಂದು ಪತ್ತೆ ಹಚ್ಚುವ ಕೆಲಸ ಕಷ್ಟವಲ್ಲ. ಕೂಡಲೇ ಈ ಪ್ರಕರಣದ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಬೇಕು. ಯಾವುದೇ ಕಾರಣಕ್ಕೂ ತನಿಖೆ ತಡವಾಗಬಾರದು. ಪೊಲೀಸರು ಪ್ರಕರಣದ ತನಿಖೆಗೆ ಹದಿನೈದು, ಇಪ್ಪತ್ತು ದಿನಗಳೋ, ಒಂದು ತಿಂಗಳ ಕಾಲ ವಿಳಂಬ ಮಾಡಿ ಈ ಪ್ರಕರಣ ಸಂಬಂಧ ಬೇರೊಂದು ಕತೆ ಕಟ್ಟುವ ಸಾಧ್ಯತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸೋಮವಾರ ಶೃಂಗೇರಿ ಶಾರದಾಂಬ ದೇವಾಲಯದಲ್ಲಿ ಹಮ್ಮಿಕೊಂಡಿರುವ ವಿಶೇಷ ಪೂಜೆ ಅಂಗವಾಗಿ ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯ ಸಂಬಂಧ ವಾಸ್ತವಾಂಶಗಳನ್ನು ಸರಕಾರ ಮತ್ತು ಪೊಲೀಸರು ಜನರ ಮುಂದಿಡಬೇಕು. ರಾಜ್ಯ ಸರಕಾರದ ಮೇಲೆ ನನಗೆ ಇತ್ತೀಚಿನ ಕೆಲ ಪ್ರಕರಣಗಳ ಹಿನ್ನೆಲೆಯಲ್ಲಿ ಅನುಮಾನವಿದೆ. ಸರಕಾರ ಕೆಲ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಸಂಘರ್ಷದ ಮನೋಭಾವನೆಯನ್ನು ಹುಟ್ಟುಹಾಕುತ್ತಿದೆ. ಬಾಂಬ್ ಪತ್ತೆ ಪ್ರಕರಣದ ತನಿಖೆ ವಿಳಂಬವಾದಲ್ಲಿ ಇದು ಮತ್ತೊಂದು ಸಂಘರ್ಷಕ್ಕೂ ಕಾರಣವಾಗಬಹುದು. ಆದ್ದರಿಂದ ಸರಕಾರ ಈ ಘಟನೆಯನ್ನು ಕೂಡಲೇ ತನಿಖೆಗೊಳಪಡಿಸಿ ವಾಸ್ತವಾಂಶಗಳನ್ನು ಜನರ ಮುಂದಿಡಬೇಕು ಎಂದರು.
ರಾಜ್ಯದ ಜನತೆ ಜ್ವಲಂತ ಸಮಸ್ಯೆಗಳಿಂದ ನಲುಗಿದ್ದಾರೆ, ಅತಿವೃಷ್ಟಿ ಸಮಸ್ಯೆಯಿಂದ ರಾಜ್ಯದ ಬಹುತೇಕ ಜಿಲ್ಲೆಗಳ ರೈತರು, ಸಾರ್ವಜನಿಕರು ಪರಿಹಾರ ಸಿಗದೇ ಸಮಸ್ಯೆಯಲ್ಲಿದ್ದಾರೆ. ಮಲೆನಾಡಿನ ರೈತರು ಕಸ್ತೂರಿ ರಂಗನ್ ವರದಿ, ಹುಲಿಯೋಜನೆ, ಕಾಫಿ, ಅಡಿಕೆ, ಕಾಳು ಮೆಣಸು ಬೆಲೆ ಇಲ್ಲದೇ ಆತಂಕದಲ್ಲಿದ್ದಾರೆ. ರೈತರ ಸಮಸ್ಯೆಗೆ ಸರಕಾರ ಸ್ಪಂದಿಸುವುದು ಮೊದಲ ಆದ್ಯತೆಯಾಗಬೇಕು. ಇಲ್ಲದ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಬಾರದು. ಸರಕಾರ ನಡೆಸುವವರು ಜನಗಳಲ್ಲಿ ಭಯಭೀತಿಯ ವಾತಾವರಣ ಉಂಟು ಮಾಡಬಾರದು. ಜನರು ನೆಮ್ಮದಿಯಿಂದ ಜೀವನ ನಡೆಸುವಂತೆ ಮಾಡುವುದು ಸರಕಾರದ ಜವಬ್ದಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಸರಕಾರ ಜವಬ್ದಾರಿಯುತವಾಗಿ ಆಡಳಿತ ನಡೆಸಬೇಕು ಎಂದು ಅವರು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ಸಂಬಂಧಿಸಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರಕಾರದ ಸಚಿವ ಸಂಪುಟ ವಿಸ್ತರಣೆ ವಿಚಾರ ನನಗೆ ಸಂಬಂಧಿಸಿದ್ದಲ್ಲ, ಅದಕ್ಕೆ ನಾನು ತಲೆಕೆಡಿಸಿಕೊಳ್ಳಲ್ಲ. ನನಗೆ ಬೇಕಿರುವುದು ಜನರು, ರೈತರು ನೆಮ್ಮದಿಯಿಂದಿರುವುದು, ಅವರ ಸಮಸ್ಯೆ ಪರಿಹಾರವಾಗುವುದೇ ಮುಖ್ಯ. 16 ಮಂದಿಯನ್ನಾದರೂ ಸಚಿವರನ್ನಾಗಿಸಿಕೊಳ್ಳಲಿ, ಇಲ್ಲವೇ 34 ಮಂದಿಯನ್ನಾದರೂ ಸಚಿವರನ್ನಾಗಿಸಿಕೊಳ್ಳಲಿ ಅಥವಾ ಎಲ್ಲರನ್ನೂ ಉಪಮುಖ್ಯಮಂತ್ರಿಯನ್ನಾಗಿ ಮಾಡಿಕೊಳ್ಳಲಿ. ಅದು ನನಗೆ ಸಂಬಂಧಿಸಿದ್ದಲ್ಲ. ಜನರು ಬೆಜೆಪಿ ಸರಕಾರವನ್ನು ಅಧಿಕಾರದಲ್ಲಿ ಕೂರಿಸಿದ್ದು, ಸರಕಾರ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಅವರು ಹೇಳಿದರು.
ರಾಮನಗರದಲ್ಲಿ ಎಸ್.ಆರ್.ಹಿರೇಮಠ್ ಅವರ ಮೇಲೆ ಹಲ್ಲೆ ಯತ್ನ ನಡೆದಿರುವ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೇನೂ ಗೊತ್ತಿಲ್ಲ, ಅವರಿಗೆ ನಾನು ರಾಮನಗರದಲ್ಲಿ ಹೊಂದಿರುವ ಆಸ್ತಿ, ಜಮೀನುಗಳ ಬಗ್ಗೆ ದಾಖಲೆ ಬೇಕಿದ್ದರೆ ನಾನೇ ಕೊಡುತ್ತಿದ್ದೆ. ಅಲ್ಲಿಯವರೆಗೆ ಅವರು ಏಕೆ ಹೋದರೋ ಗೊತ್ತಿಲ್ಲ. ಅಲ್ಲಿ ನನ್ನ ಭೂಮಿ ಇರುವುದು ನಿಜ. 1984-85ರಲ್ಲಿ ನಾನು ಆ ಜಮೀನು ಖರೀದಿಸಿದ್ದೇನೆ. ನಾನು ರಾಜಕಾರಣಕ್ಕೆ ಬರುವ ಮುನ್ನ ಸುಮಾರು 35 ವರ್ಷಗಳ ಹಿಂದಿನ ವಿಚಾರ ಅದು. ಅವರು ಅಂದಿನ ವಿಚಾರವನ್ನೂ ಇಂದು ಹಿಡಿದು ಅಲ್ಲಾಡಿಸಲು ಹೊರಟಿರುವುದರ ಉದ್ದೇಶ ಏನು ಎಂದು ತಿಳಿದಿಲ್ಲ, ಅವರಿಗಾಗಲಿ, ರವಿಕೃಷ್ಣ ರೆಡ್ಡಿ ಅವರಿಗಾಗಲೀ ಆ ಜಮೀನಿನ ದಾಖಲೆ, ಮಾಹಿತಿ ಬೇಕಿದ್ದರೆ ನಾನೇ ಕೊಡುತ್ತಿದ್ದೆ ಎಂದರು.
ಈ ವೇಳೆ ವಿಪ ಸದಸ್ಯ ಬೋಜೇಗೌಡ, ಜೆಡಿಎಸ್ ಮುಖಂಡರಾದ ರಾಜೇಂದ್ರ, ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.
ಕಲ್ಲಡ್ಕ ಪ್ರಭಾಕರ್ ಭಟ್ ಅವರು ಸಿಎಂ ಯಡಿಯೂರಪ್ಪ ಮುಂದಿನ ಯಾವ ಚುನಾವಣೆಗಳಲ್ಲೂ ಸ್ಪರ್ಧಿಸಲ್ಲ ಎಂದು ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮಂಗಳೂರು ಬಿಟ್ಟು ರಾಜ್ಯಾದ್ಯಂತ ಸುತ್ತೋಕೆ ಶುರುಮಾಡಿದ್ದಾರೆ. ಅವರಿಗೂ ಬಿಜೆಪಿಗೂ ಯಾವ ಒಪ್ಪಂದ ಆಗಿದೆಯೋ ಗೊತ್ತಿಲ್ಲ. ಬಿಜೆಪಿಯಲ್ಲಿ ಅವರೇ ಈಗ ಪ್ರಮುಖರಾಗಿದ್ದಾರೆ. ಅವರು ನೀಡುತ್ತಿರುವ ಎಲ್ಲ ಹೇಳಿಕೆಯನ್ನು ಗಮನಿಸಿದ್ದೇನೆ. ಅವರು ಆ ಪಕ್ಷದಲ್ಲಿ ಏನು ತೀರ್ಮಾನ ಮಾಡಿಕೊಂಡಿದ್ದಾರೋ ಗೊತ್ತಿಲ್ಲ ಎಂದರು.