ಸಹಕಾರಿ ಸಾರಿಗೆ ಸ್ಥಗಿತ: ಸರಕಾರದಿಂದ ನೆರವಿನ ಹಸ್ತ
ಅಪೆಕ್ಸ್ ಬ್ಯಾಂಕ್ನಿಂದ 5 ಕೋಟಿ ಬಡ್ಡಿ ರಹಿತ ಸಾಲ ನೀಡಲು ಸರಕಾರ ಭರವಸೆ: ಧರ್ಮಪ್ಪ
ಚಿಕ್ಕಮಗಳೂರು, ಫೆ.20: ಸಹಕಾರ ಸಾರಿಗೆ ಸಂಸ್ಥೆ ಆರ್ಥಿಕ ನಷ್ಟಕ್ಕೆ ಸಿಲುಕಿ ಬಾಗಿಲು ಮುಚ್ಚುವ ಹಂತದಲ್ಲಿದ್ದು, ನೆರವಿಗೆ ಬರಬೇಕೆಂದು ಸಂಸ್ಥೆಯ ನೌಕರರು ನಡೆಸುತ್ತಿರುವ ಧರಣಿ ಗುರುವಾರ ಐದನೇ ದಿನಕ್ಕೆ ಕಾಲಿಟ್ಟಿದೆ. ಧರಣಿ ಹಿನ್ನೆಲೆಯಲ್ಲಿ ಸರಕಾರ ಸಂಸ್ಥೆಯ ಆಡಳಿತ ಮಂಡಳಿಯನ್ನು ಬುಧವಾರ ಮಾತುಕತೆಗೆ ಕರೆದಿದ್ದು, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸಂಸ್ಥೆಯ ನೆರವಿಗೆ ಮುಂದಾಗುವುದಾಗಿ ಭರವಸೆ ನೀಡಿದ್ದಾರೆಂದು ಸಂಸ್ಥೆಯ ಅಧ್ಯಕ್ಷ ಧರ್ಮಪ್ಪ ತಿಳಿಸಿದ್ದಾರೆ.
1991ರಲ್ಲಿ ಆರಂಭವಾದ ಸಹಕಾರಿ ಸಾರಿಗೆ ಸಂಸ್ಥೆ ಮಲೆನಾಡಿನ ಜನರ ಜೀವನಾಡಿಯಾಗಿತ್ತು. ದುರ್ಗಮ ಪ್ರದೇಶಗಳ ಸಂಪರ್ಕ ಕಲ್ಪಿಸುವ ಕೊಂಡಿಯಾಗಿದ್ದ ಸಂಸ್ಥೆಯಲ್ಲಿ ಸುಮಾರು 300 ಹೆಚ್ಚು ನೌಕರರು ಮತ್ತು ಅವರ ಕುಟುಂಬಗಳು ಸಂಸ್ಥೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದರು. ರಸ್ತೆ ತೆರಿಗೆ, ವಿಮೆ, ಡೀಸೆಲ್ ಬೆಲೆ ಏರಿಕೆ, ಬಸ್ ಬಿಡಿಭಾಗಗಳ ದುಬಾರಿ ಬೆಲೆಯಿಂದ ಏರಿಕೆಯಾಗದ ಟಿಕೆಟ್ ದರ, ಸರ್ಕಾರದಿಂದ ಬರಬೇಕಿದ್ದ ಅನುದಾನ ಸಿಗದೆ ಸಂಸ್ಥೆ ದೊಡ್ಡ ಹೊಡೆತಕ್ಕೆ ಸಿಲುಕಿ ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿತ್ತು.
ಸಂಸ್ಥೆಯ ಉಳಿವಿನ ದೃಷ್ಟಿಯಿಂದ ಸರಕಾರ ನೆರವಿಗೆ ಬರಬೇಕು ಎಂದು ನೌಕರರು ಕಳೆದ ಸೋಮವಾರದಿಂದ ಪ್ರತಿಭಟನೆಯ ಹಾದಿ ಹಿಡಿದಿದ್ದರು. ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುತ್ತಿದ್ದ 73 ಬಸ್ಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಸಂಸ್ಥೆಯ ನೌಕರರ ನ್ಯಾಯಯುತ ಬೇಡಿಕೆಗೆ ಸ್ಪಂಧಿಸಿದ ಜಿಲ್ಲೆಯ ಮೂರು ರಾಜಕೀಯ ಪಕ್ಷದ ಮುಖಂಡರು ನೌಕರರನ್ನು ಭೇಟಿ ಮಾಡಿ ಸರಕಾರ ನೆರವು ನೀಡುವಂತೆ ಸರಕಾರದ ಮೇಲೆ ಒತ್ತಡ ತರುವುದಾಗಿ ಭರವಸೆಯನ್ನು ನೀಡಿದ್ದರು.
ಸಹಕಾರಿ ಸಾರಿಗೆ ಸಂಸ್ಥೆಯ ಸಮಸ್ಯೆಗೆ ಪೂರಕವಾಗಿ ಸ್ಪಂದಿಸಿರುವ ರಾಜ್ಯ ಸರಕಾರ, ಬುಧವಾರ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅಧಿಕಾರಿಗಳ ಸಭೆ ನಡೆಸಿ ಅಪೆಕ್ಸ್ ಬ್ಯಾಂಕ್ನಿಂದ ಬಡ್ಡಿ ರಹಿತ ಸಾಲಕ್ಕೆ ಅವಕಾಶ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದು, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು 7 ಕೋಟಿ ಸೌಲಸೌಲಭ್ಯ ಹಾಗೂ ತೆರಿಗೆಯಲ್ಲಿ ರಿಯಾಯಿತಿ ನೀಡುವಂತೆ ಮನವಿ ಮಾಡಿದ್ದು, ಸಚಿವರು ಈ ಸಂಬಂಧ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದ್ದಾರೆಂದು ಧರ್ಮಪ್ಪ ವಾರ್ತಾಭಾರತಿಗೆ ತಿಳಿಸಿದ್ದಾರೆ.
ಗುರುವಾರ ಸದನದಲ್ಲಿ ಮಾಜಿ ಸಚಿವೆ ಜಯಮಾಲಾ ಅವರು ಸಹಕಾರ ಸಾರಿಗೆ ಸಂಸ್ಥೆ ನಷ್ಟದಿಂದ ಹೊರ ತರಲು ಸರಕಾರ ನೆರವು ನೀಡುವಂತೆ ಪ್ರಸ್ತಾಪಿಸಿದ್ದು, ಇದಕ್ಕೆ ಸಾರಿಗೆ ಸಚಿವರು ಸರಕಾರದ ನೆರವು ನೀಡುವ ನಿಟ್ಟಿನಲ್ಲಿ ಎಲ್ಲ ಕ್ರಮವಹಿಸಿದೆ. ಅಲ್ಲದೇ ಈ ಸಂಬಂಧ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆಂದು ತಿಳಿದುಬಂದಿದೆ. ಸರಕಾರದ ಈ ಭರವಸೆಯಿಂದಾಗಿ ಸಂಸ್ಥೆಯ ನೌಕರರೂ ಸೇರಿದಂತೆ ಮಲೆನಾಡಿನ ಪ್ರಯಾಣಿಕರು ಮತ್ತು ಸಾರ್ವಜನಿಕರಲ್ಲಿ ಜಿಲ್ಲೆಯ ಹೆಮ್ಮೆಯ ಸಂಸ್ಥೆಯ ಬಸ್ಗಳು ಮತ್ತೆ ರೋಡಿಗಳಿಯುವ ಭರವಸೆ ಮೂಡಿದೆ.
ಇನ್ನು ಕೊಪ್ಪ ಪಟ್ಟಣದಲ್ಲಿ ಸಾರಿಗೆ ಸಂಸ್ಥೆಯ ನೌಕರರು ಬಸ್ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಗುರುವಾವರವೂ ಪ್ರತಿಭಟನೆಗೆ ಮುಂದುವರಿಸಿದ್ದು, ಸಹಕಾರಿ ಸಾರಿಗೆ ಬಸ್ ರಸ್ತೆಗಳಿಯದೆ ಗುರುವಾರಕ್ಕೆ ಐದನೇ ದಿನಕ್ಕೆ ಕಾಲಿಟ್ಟಿದೆ. ಬಸ್ ಸಂಚಾರ ಸ್ಥಗಿತಗೊಳಿಸಿರುವುದರಿಂದ ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್ಆರ್ಪುರ ಹಾಗೂ ನೆರೆಯ ಶಿವಮೊಗ್ಗ ಜಿಲ್ಲೆ, ಉಡುಪಿ ಜಿಲ್ಲೆಯ ಪ್ರಯಾಣಿಕರಿಗೂ ತೊಂದರೆ ಉಂಟಾಗಿದೆ.
ಕಾರ್ಮಿಕರ ಹೋರಾಟವನ್ನು ಬೆಂಬಲಿಸಿ ವಿನಯ್ ಗುರೂಜೀ ಅವರು ಮಂಗಳವಾರ ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರ ನೌಕರರ ನೆರವಿಗೆ ಬಾರದಿದ್ದರೇ ತಾವು ನೌಕರರೊಂದಿಗೆ ಉಪವಾಸ ಸತ್ಯಗ್ರಹ ನಡೆಸುವುದಾಗಿ ತಿಳಿಸಿದ್ದರು. ಸರ್ಕಾರ ಸಂಸ್ಥೆಯ ನೆರವಿಗೆ ಬರುವವರೆಗೂ ತಮ್ಮ ಪಟ್ಟು ಸಡಿಸುವುದಿಲ್ಲ ಎಂದು ಹೇಳಿದ್ದರು.
ಸಹಕಾರಿ ಸಾರಿಗೆ ಬಸ್ ಮಲೆನಾಡಿನ ಜನರ ಸಾರಿಗೆ ಸಂಪರ್ಕ ಕಲ್ಪಿಸುವ ಸಂಬಂಧವನ್ನು ಮಾತ್ರ ಹೊಂದಿರಲಿಲ್ಲ, ಭಾವನಾತ್ಮಕ ಸಂಬಂಧವನ್ನು ಹೊಂದಿದ್ದು, ಕಳೆದ ಐದು ದಿನಗಳಿಂದ ಬಸ್ ರಸ್ತೆಗಳಿಯದೇ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಮಲೆನಾಡಿನ ದುರ್ಗಮ ಪ್ರದೇಶದಿಂದ ನಗರ ಪ್ರದೇಶಗಳಿಗೆ ಬರಲು ಬಸ್ ಇಲ್ಲದೇ ಕಂಗೆಟ್ಟಿದ್ದ ಜನರಿಗೆ ಸರ್ಕಾರದ ನಿಲುವಿನಿಂದ ಸಂತೋಷಗೊಂಡಿದ್ದು, ಮತ್ತೇ ಬಸ್ ಸಂಚಾರಕ್ಕಾಗಿ ಎದುರು ನೋಡುತ್ತಿದ್ದಾರೆ.
ಸಹಕಾರಿ ಸಾರಿಗೆ ಸಂಸ್ಥೆಯ ನೌಕರರ ಪ್ರತಿಭಟನೆಗೆ ಸರ್ಕಾರ ಪೂರಕವಾಗಿ ಸ್ಪಂದಿಸಿದೆ. ಸಾರಿಗೆ ಸಚಿವರು ಬುಧವಾರ ಅಧಿಕಾರಿಗಳ ಮತ್ತು ಸಂಸ್ಥೆಯ ಅಧ್ಯಕ್ಷರು ಮತ್ತು ನಿರ್ದೇಶಕರೊಂದಿಗೆ ಸಭೆ ನಡೆಸಿ ಅಪೆಕ್ಸ ಬ್ಯಾಂಕ್ನಿಂದ ಬಡ್ಡಿ ರಹಿತ ಸಾಲ ಕೊಡಿಸುವುದಾಗಿ ಭರವಸೆ ನೀಡಿದ್ದರು. ಗುರುವಾರ ಅಧಿವೇಶನದಲ್ಲಿ ಸರ್ಕಾರ ಸಂಸ್ಥೆಗೆ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಸರ್ಕಾರದ ನಡೆಯಿಂದ ನಮಗೆ ಸಂತೋಷವಾಗಿದೆ. ಆದರೆ, ಸರ್ಕಾರದಿಂದ ಲಿಖಿತ ರೂಪದ ಭರವಸೆ ನೀಡುವರೆಗೂ ನಾವು ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಮತ್ತು ಬಸ್ಗಳು ರಸ್ತೆಗಿಳಿಸುವುದಿಲ್ಲ. ಸರ್ಕಾರ ನಮ್ಮ ಬೇಡಿಕೆಗೆ ಉತ್ತಮ ಸ್ಪಂದನೆ ನೀಡುತ್ತಿದೆ.
-ಧರ್ಮಪ್ಪ, ಅಧ್ಯಕ್ಷ ಸಹಕಾರಿ ಸಾರಿಗೆ ಸಂಸ್ಥೆ, ಕೊಪ್ಪ
ಸರಕಾರ ಸಹಕಾರ ಸಾರಿಗೆ ಸಂಸ್ಥೆಯ ಉಳಿವಿಗೆ ಮುಂದಾಗಿದ್ದು, ನಮಗೆ ಸಂತೋಷ ತಂದಿದೆ. ಆದರೆ, ಸರಕಾರಿಂದ ಅಧಿಕೃತವಾಗಿ ಪತ್ರ ಬರುವವರೆಗೂ ಪ್ರತಿಭಟನೆಯಿಂದ ಹಿಂದೇ ಸರಿಯುವುದಿಲ್ಲ. ಸಚಿವರ ಹೇಳಿಕೆಯಿಂದ ಸರಕಾರ ಸಂಸ್ಥೆಯ ನೆರವಿಗೆ ಬರುವ ಸಂಪೂರ್ಣ ವಿಶ್ವಾಸ ಮೂಡಿದೆ.
- ವಿಜಯ್ಕುಮಾರ್ ನಿರ್ದೇಶಕರು, ಸಹಕಾರಿ ಸಾರಿಗೆ ಸಂಸ್ಥೆ.