ಗಡಿ ವಿವಾದದ ಕುರಿತು ಪ್ರತ್ಯೇಕ ಇಲಾಖೆ ರಚಿಸಿ: ಎಚ್.ಕೆ.ಪಾಟೀಲ್
ಬೆಂಗಳೂರು, ಫೆ.20: ರಾಜ್ಯದ ಗಡಿ ವಿವಾದದ ಕುರಿತು ಗಮನ ಹರಿಸಲು ಪ್ರತ್ಯೇಕವಾದ ಇಲಾಖೆಯನ್ನು ಸರಕಾರ ರಚನೆ ಮಾಡಬೇಕು. ಇದರಿಂದಾಗಿ, ನಾವು ಸುಪ್ರೀಂಕೋರ್ಟ್ನಲ್ಲಿ ನಡೆಸುವ ಹೋರಾಟಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಎಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗಡಿ ಭಾಗದ ಜನರ ಭಾವನೆಗಳಿಗೆ ಪೂರಕವಾಗಿ ನಾವು ಕೆಲಸ ಮಾಡಬೇಕಾಗುತ್ತದೆ. ಮಹಾರಾಷ್ಟ್ರ ಸರಕಾರದವರು ನೀಡುವ ಉದ್ಧಟತನದ ಹೇಳಿಕೆಗಳಿಗೆ ತಕ್ಕ ಉತ್ತರವನ್ನು ಸರಕಾರ ನೀಡಬೇಕು ಎಂದರು.
ಮಹಾದಾಯಿ ವಿಚಾರದಲ್ಲಿ ಕೇಂದ್ರ ಸರಕಾರ ಗೋವಾ ರಾಜ್ಯಕ್ಕೆ ಹೆಚ್ಚಿನ ಬೆಂಬಲ ಕೊಟ್ಟಿದ್ದರೂ ಸಹ, ಈಗ ನಮಗೆ ಉತ್ತಮ ಅವಕಾಶವಿದೆ. ಕೆಲಸ ಪ್ರಾರಂಭಿಸಬೇಕು. ಮುಖ್ಯಮಂತ್ರಿ ಮಾ.5ರಂದು ಮಂಡಿಸುವ ಬಜೆಟ್ನಲ್ಲಿ ಮಹಾದಾಯಿಯಲ್ಲಿ ನಮಗೆ ಹಂಚಿಕೆಯಾಗಿರುವ 13.5 ಟಿಎಂಸಿ ನೀರಿನ ಸದ್ಬಳಕೆಗೆ ಹಣವನ್ನು ಮೀಸಲಿಡೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದಲ್ಲಿ 1.07 ಲಕ್ಷ ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಭೌತಿಕವಾಗಿ ಅವುಗಳನ್ನು ವಿಲೇವಾರಿ ಮಾಡಲು ಹೊರಟರೆ ಐದು ವರ್ಷಗಳ ಕಾಲಾವಕಾಶ ಬೇಕಾಗಬಹುದು. ಕಡತಗಳ ವಿಲೇವಾರಿ ತ್ವರಿತಗತಿಯಲ್ಲಿ ಆದರೆ, ಶೇ.50ರಷ್ಟು ಭ್ರಷ್ಟಾಚಾರವನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದರು.
ನ್ಯಾಯಾಲಯಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಹಾಗೂ ಇನ್ನಿತರ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಜಂಟಿ ಸದನ ಸಮಿತಿ ರಚಿಸುವ ಅಗತ್ಯವಿದೆ ಎಂದು ಎಚ್.ಕೆ.ಪಾಟೀಲ್ ಮಾಡಿದ ಮನವಿಗೆ ಸ್ಪಂದಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಸದನ ಸಮಿತಿ ರಚನೆಗೆ ಸಹಮತ ವ್ಯಕ್ತಪಡಿಸಿದರು.