ದಿಲ್ಲಿಯಲ್ಲಿ ಹಿಂಸಾಚಾರ: ಬಿಜೆಪಿ ನಾಯಕ ಕಪೀಲ್ ಮಿಶ್ರಾ ಬಂಧನಕ್ಕೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ
ಕಲಬುರಗಿ: ದಿಲ್ಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಮಾಜಿ ಶಾಸಕ ಕಪಿಲ್ ಮಿಶ್ರಾ ಕಾರಣ ಎಂದು ಆರೋಪಿಸಿರುವ 'ಗುಲಬರ್ಗಾ ಯೂತ್'ನ ನೂರಾರು ಕಾರ್ಯಕರ್ತರು, ಕಪಿಲ್ ಮಿಶ್ರಾ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ಮಿಶ್ರಾ ಅವರ ಪ್ರತಿಕೃತಿಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಜಗತ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಸೈಯದ್ ಅಲಿಮ್ ಇಲಾ, ದಿಲ್ಲಿಯಲ್ಲಿ ನಡೆಯುತ್ತಿರುವ ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರುದ್ಧದ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಕೋಮುಗಲಭೆ ಸೃಷ್ಟಿಸಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿದರು.
ದಿಲ್ಲಿಯಲ್ಲಿ ಹಿಂಸಾಚಾರಕ್ಕೆ ಕಾರಣವಾದ, ಶಾಹೀನ್ ಬಾಗ್ ಹೋರಾಟಗಾರರ ಮೇಲೆ ಕೋಮುಗಲಭೆ, ದೌರ್ಜನ್ಯ ಎಸಗುತ್ತಿರುವ ಕಪಿಲ್ ಮಿಶ್ರಾ ಇವರನ್ನು ಬಂಧಿಸಿ ಶಾಂತಿಯುತವಾಗಿ ಹೋರಾಟ ನಡೆಸಲು ಬಿಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಜೀಮ್ ಶೇಕ್, ಅಬ್ದುಲ್ ಸತ್ತಾರ್, ಮುಹಮ್ಮದ್ ಮೀನಾಜ್ ಲತೀಫ್, ಮನ್ಸೂರ್ ರಝಾ, ನಝೀರ್ ಶೇಕ್, ಅಲಮದಾರ್ ಜೈದಿ, ಸೈಯದ್ ಮೀನಾಜ್ ಹುಸೈನಿ, ಸೈಯದ್ ಅಕ್ಬರ್ ಜೆ.ಡಿ, ಮಹಮ್ಮದ್ ಸಾಜಿದ್ ಕಲ್ಯಾಣಿ, ಅಸ್ಲಮ್ ಹಾಜಿ ಸೇರಿದಂತೆ ಹಲವರಿದ್ದರು.