ಕ್ರಿಕೆಟ್ ಸ್ಟಂಪ್, ದೊಣ್ಣೆಯಿಂದ ದಾಳಿ ನಡೆಸಿ ಯುವಕನ ಕೊಲೆ
ಕಲಬುರಗಿ: ನಗರದ ಗೇಸುದರಾಜ್ ಕಾಲೋನಿಯ ಜವಾರೆ ಹಿಂದ್ ಶಾಲೆ ಹತ್ತಿರ ಯುವಕನೋರ್ವನನ್ನು ಕೊಲೆ ಮಾಡಿರುವ ಘಟನೆ ಇಂದು ಸಂಜೆ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಜವಾರೆ ಹಿಂದ್ ನಿವಾಸಿ ಅಕ್ರಮ್ (28) ಕೊಲೆಯಾದ ಯುವಕ. ಅಕ್ರಮ್ ಪ್ರೋಫೆಷನಲ್ ಫರ್ನಿಚರ್ ಎಂಬ ಅಂಗಡಿಯಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದು, ಇಂದು ಸಂಜೆ 5.30ರ ಸುಮಾರಿಗೆ ಬೈಕ್ ನಲ್ಲಿ ಅಕ್ರಮ್ ಮನೆಗೆ ಆಗಮಿಸಿದ ದುಷ್ಕರ್ಮಿಗಳು ಕ್ರಿಕೆಟ್ ಸ್ಟಂಪ್, ದೊಣ್ಣೆ ಹಾಗೂ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ನಂತರ ಆರೋಪಿಗಳು ಪರಾರಿಯಾಗಿದ್ದಾರೆ.
ಪಿಎಸ್ಐ ಅಸ್ಲಮ್ ಬಾಷಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದು, ಹಳೆ ವೈಷ್ಯಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಕೊಲೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.
ರೋಜಾ ಪೊಲೀಸರು ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.