ರಾಜ್ಯದ ಎಲ್ಲ ಒಕ್ಕೂಟಗಳ ವ್ಯಾಪ್ತಿಯಲ್ಲಿ ಹಾಲು ಖರೀದಿ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಬೆಂಗಳೂರು, ಎ.2: ರಾಜ್ಯದ ಹಾಲು ಉತ್ಪಾದಕರಿಂದ ಎಲ್ಲ 14 ಒಕ್ಕೂಟಗಳ ವ್ಯಾಪ್ತಿಯಲ್ಲಿ ದಿನಕ್ಕೆರಡು ಬಾರಿ ತಪ್ಪದೇ ಗುಣಮಟ್ಟದ ಹಾಲು ಖರೀದಿಸಬೇಕು ಎಂದು ಕರ್ನಾಟಕ ಹಾಲು ಒಕ್ಕೂಟದ(ಕೆಎಂಎಫ್) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸೂಚನೆ ನೀಡಿದ್ದಾರೆ.
ಕೊರೋನ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಕೆಎಂಎಫ್ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ನಡೆದ ಚರ್ಚೆಯಲ್ಲಿ ಸೂಚನೆ ನೀಡಲಾಗಿದ್ದು, ಕೋವಿಡ್ 19 ವೈರಸ್ ಹಾವಳಿಯಿಂದ ಉಂಟಾದ ಕ್ಲಿಷ್ಟಕರ ಸಂದರ್ಭದಲ್ಲಿ ಪಶು ಆಹಾರಕ್ಕೆ ತೊಂದರೆಯಾಗಬಾರದು. ಈ ಹಿನ್ನೆಲೆಯಲ್ಲಿ ಎಪ್ರಿಲ್ ಅಂತ್ಯದವರೆಗೂ ಪ್ರತಿ ಟನ್ ಪಶು ಆಹಾರಕ್ಕೆ 500 ರೂ. ರಿಯಾಯಿತಿ ನೀಡಬೇಕು ಎಂದು ತಿಳಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ಸಿಬ್ಬಂದಿಗೆ ನಿತ್ಯ ಒಂದು ದಿನದ ಹೆಚ್ಚುವರಿ ವೇತನ ನೀಡಲು ಅಥವಾ ಪರಿಹಾರ ರಜೆಗೂ ಅವಕಾಶ, ಗುತ್ತಿಗೆ ನೌಕರರು ಪ್ರತಿ ದಿನ 500 ಹೆಚ್ಚುವರಿಯಾಗಿ ಹಾಗೂ ಹಾಲು ಮತ್ತಿದರ ಉತ್ಪನ್ನಗಳ ಸಾಗಣೆ ಮಾಡುವ ವಾಹನ ಚಾಲನಾ ಸಿಬ್ಬಂದಿಗೆ ಪ್ರೋತ್ಸಾಹಧನ ರೂಪದಲ್ಲಿ ನೀಡುವುದು. ಈ ಪ್ರೋತ್ಸಾಹಧನವನ್ನು ಸಿದ್ಧ ಪಶು ಆಹಾರ ಮತ್ತು ಕಚ್ಚಾ ಆಹಾರ ಪೂರೈಸುವ ವಾಹನ ಚಾಲಕರಿಗೂ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.