ಮೈಸೂರಿನಿಂದ ನಿಝಾಮುದ್ದೀನ್ ಗೆ ತೆರಳಿದ್ದ ಯಾರಲ್ಲೂ ಕೊರೋನಾ ಪತ್ತೆಯಾಗಿಲ್ಲ: ಸಚಿವ ಸೋಮಣ್ಣ ಸ್ಪಷ್ಟನೆ
ಮೈಸೂರು,ಎ.2: ಮೈಸೂರಿನಿಂದ ನಿಝಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿ ಬಂದಿರುವವರಲ್ಲಿ ಯಾರೊಬ್ಬರಿಗೂ ಕೊರೋನ ಸೋಂಕು ತಗುಲಿಲ್ಲ ಎಂದು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿಯ ನಿಝಾಮುದ್ದೀನ್ ಧಾರ್ಮಿಕ ಸಭೆಗೆ ಮೈಸೂರಿನಿಂದ 75 ಮಂದಿ ಹೋಗಿದ್ದರು. ಅದರಲ್ಲಿ 45 ಮಂದಿ ವಾಪಸ್ ಬಂದಿದ್ದಾರೆ. ಬಂದಿರುವವರಲ್ಲಿ ಯಾರೊಬ್ಬರಿಗೂ ಕೊರೋನ ಸೋಂಕು ತಗುಲಿಲ್ಲ, ಆದರೂ ಮುಂಜಾಗ್ರತೆಯಿಂದ ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಿದರು.
ದೆಹಲಿಯ ನಿಝಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿದ್ದವರ ಮಾಹಿತಿ ಲಭ್ಯವಿದ್ದು, ಮೈಸೂರು ನಗರದಿಂದ 62 ಮಂದಿ ದೆಹಲಿಗೆ ಹೋಗಿದ್ದರು. ಇನ್ನೂ ಗ್ರಾಮೀಣ ಭಾಗದಿಂದ 13 ಮಂದಿ ಹೋಗಿದ್ದರು. ಅದರಲ್ಲಿ 45 ಮಂದಿ ವಾಪಸ್ ಬಂದಿದ್ದಾರೆ. ಇನ್ನೂ ನಗರದ 17 ಮಂದಿ ವಾಪಸ್ ಬಂದೇ ಇಲ್ಲ. ಇನ್ನು ಎಚ್.ಡಿ.ಕೋಟೆ 6, ಬನ್ನೂರಿನಲ್ಲಿ ಒಬ್ಬರು ಮತ್ತು ಪಿರಿಯಾಪಟ್ಟಣದಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದರು.
ಒಟ್ಟಾರೆ ದೆಹಲಿಯ ನಿಝಾಮುದ್ದೀನ್ ಧಾಮಿಕ ಸಭೆಗೆ ಮೈಸೂರಿನಿಂದ ಹೋಗಿ ಬಂದಿರುವ ಯಾರಿಗೂ ಕೊರೋನ ಸೋಂಕು ಬಂದಿಲ್ಲ ಎಂದು ಮಾಹಿತಿ ನೀಡಿದರು.