ಆ್ಯಂಬುಲೆನ್ಸ್ ನಲ್ಲಿ ಮದ್ಯ ಸಾಗಣೆ: ಆರೋಪಿಗಳ ಬಂಧನ
ರಾಜ್ಯದಲ್ಲಿ ನಡೆದ ಘಟನೆ
ಚಿತ್ರದುರ್ಗ, ಎ.21: ಆ್ಯಂಬುಲೆನ್ಸ್ ನಲ್ಲಿ ಮದ್ಯವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಆ್ಯಂಬುಲೆನ್ಸ್ ಚಾಲಕ ಸುಬಾನ್, ಲ್ಯಾಬ್ ಟೆಕ್ನಿಶಿಯನ್ ಸಂತೋಷ, ಶಿವಗಂಗಾ ಗ್ರಾಮದ ಜೀವನ್ ಹಾಗೂ ಗಿರೀಶ ಎಂಬುವವರನ್ನು ಬಂಧಿಸಲಾಗಿದೆ. ಇವರ ಬಳಿಯಿಂದ 69 ಸಾವಿರ ಮೌಲ್ಯದ 14 ಬಾಕ್ಸ್ ಮದ್ಯ, ಆಂಬ್ಯುಲೆನ್ಸ್ ಹಾಗೂ ಆಮ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮದ್ಯ ಸಾಗಣೆಗೆ ಎಚ್.ಡಿ.ಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬ್ಯುಲೆನ್ಸ್ ಬಳಸಿಕೊಳ್ಳಲಾಗಿದೆ. ಉಳ್ಳರ್ತಿ ಗ್ರಾಮದ ನರಸಿಂಹರಾಜು ಎಂಬುವರಿಗೆ ಸೇರಿದ ಬಾರ್ನಿಂದ ಮದ್ಯ ಸಾಗಣೆ ಮಾಡಿದ್ದು ತನಿಖೆಯಿಂದ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ಮಲ್ಲಾಡಿಹಳ್ಳಿ ಸಮೀಪ ದಾಳಿ ನಡೆಸಿದ ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಆ್ಯಂಬುಲೆನ್ಸ್ನಿಂದ ಆಮ್ನಿಗೆ ಮದ್ಯ ತುಂಬುತ್ತಿದ್ದ ವೇಳೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾಹಿತಿ ನೀಡಿದ್ದಾರೆ.