ವಾಟ್ಸ್ ಆ್ಯಪ್ ನಲ್ಲಿ ಧರ್ಮನಿಂದನೆ ಆರೋಪ: ಪತ್ರಕರ್ತನ ವಿಚಾರಣೆ ನಡೆಸಿದ ಸಿದ್ದಾಪುರ ಪೊಲೀಸರು
ಸಾಂದರ್ಭಿಕ ಚಿತ್ರ
ಸಿದ್ದಾಪುರ (ಕೊಡಗು), ಎ.27: ವಾಟ್ಸ್ ಆ್ಯಪ್ ಗ್ರೂಪಿನಲ್ಲಿ ಧರ್ಮ ನಿಂದನೆ ಮಾಡಿರುವ ದೂರಿನ ಮೇರೆಗೆ ಪತ್ರಿಕಾ ವರದಿಗಾರನನ್ನು ಪೊಲೀಸರು ವಿಚಾರಣೆ ನಡೆಸಿದ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಕೆಲವು ಪತ್ರಕರ್ತರನ್ನು ಒಳಗೊಂಡ ವಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ಪತ್ರಿಕೆಯೊಂದರ ವರದಿಗಾರ ಸಿದ್ದಾಪುರದ ವಸಂತ್ ಕುಮಾರ್ ಎಂಬಾತ ಇಸ್ಲಾಂ ಧರ್ಮವನ್ನು ಅವಹೇಳನ ಮಾಡುವ ಸಂದೇಶವನ್ನು ಪೋಸ್ಟ್ ಮಾಡಿರುವ ಬಗ್ಗೆ ಸಿದ್ದಾಪುರದ ಮುಸ್ತಫ ಎಂಬವರು ರವಿವಾರ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರನ್ನು ಸ್ವೀಕರಿಸಿದ ಪೊಲೀಸರು ಸೋಮವಾರ ವಸಂತ್ ಕುಮಾರ್ ನನ್ನು ಪೊಲೀಸ್ ಠಾಣೆಗೆ ಕರೆದು, ಸಿದ್ದಾಪುರ ಪಿ.ಎಸ್.ಐ ಮೋಹನ್ ರಾಜ್ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಧರ್ಮವನ್ನು ಅವಹೇಳನ ಮಾಡುವ ಉದ್ದೇಶವಾಗಲಿ, ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ವಾಟ್ಸ್ ಆ್ಯಪ್ ಗ್ರೂಪಿನಲ್ಲಿ ಪೋಸ್ಟ್ ಮಾಡಿರುವುದಲ್ಲ ಹಾಗೂ ಮುಂದಿನ ದಿನಗಳಲ್ಲಿ ಇಂತಹ ಸಂದೇಶಗಳನ್ನು ಕಳಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕ್ಷಮೆ ಕೇಳಿರುವ ಕಾರಣ ವಸಂತ್ ಕುಮಾರ್ ನಿಗೆ ಎಚ್ಚರಿಕೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.