ರಾಜ್ಯದಲ್ಲಿ ಮೇ 9ರಿಂದ ಲಾಡ್ಜ್, ಬಾರ್, ಕ್ಲಬ್ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ
ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 8: ಕೊರೋನ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ 'ಕಂಟೈನ್ಮೆಂಟ್ ಝೋನ್'ಗಳನ್ನು ಹೊರತುಪಡಿಸಿ ಹಸಿರು ಮತ್ತು ಕಿತ್ತಲೆ ವಲಯಗಳಲ್ಲಿನ ಲಾಡ್ಜ್, ಬಾರ್ ಮತ್ತು ಕ್ಲಬ್ಗಳಲ್ಲಿಯೂ ಮದ್ಯ ಮಾರಾಟಕ್ಕೆ ನಾಳೆ(ಮೇ 9)ರಿಂದ ಅವಕಾಶ ನೀಡಲಾಗುವುದು ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮದ್ಯ ಮಾರಾಟ ಮಾಡಬಹುದು. ಕೇವಲ ಪಾರ್ಸಲ್ಗೆ ಮಾತ್ರ ಅವಕಾಶವಿದ್ದು, ಎಂಆರ್ಪಿ ದರಕ್ಕೆ ಮದ್ಯ ಮಾರಾಟ ಮಾಡಬೇಕು. ಒಂದು ವೇಳೆ ಎಂಆರ್ಪಿ ದರಕ್ಕಿಂತ ಹೆಚ್ಚಿನ ಬೆಲೆ ಮಾರಾಟ ಮಾಡಿದರೆ ಸನ್ನದ್ದು ಅಮಾನತುಪಡಿಸಲಾಗುವುದು ಎಂದು ಎಚ್ಚರಿಸಿದರು.
ಮೊರನೇ ಹಂತದ ಲಾಕ್ಡೌನ್ ಸಡಿಲಿಕೆ ಬಳಿಕ ರಾಜ್ಯಾದ್ಯಂತ ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಸಿಎಲ್-2 ಮತ್ತು ಸಿಎಲ್-11 ಸೇರಿ ಎಂಎಸ್ಐಎಲ್ ಶಾಪ್ಗಳಲ್ಲಿ ಮದ್ಯ (ಪಾರ್ಸಲ್) ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಮೊದಲ ದಿನದ ಮದ್ಯ ಮಾರಾಟಕ್ಕೆ ಕೆಲವು ಕಡೆಗಳಲ್ಲಿ ನೂಕುನುಗ್ಗಲು ಉಂಟಾಗಿತ್ತು. ಗಡಿಭಾಗದಲ್ಲಿ ಹೊರ ರಾಜ್ಯದವರು ಬಂದು ಮದ್ಯ ಖರೀದಿಗೆ ಮುಗಿಬಿದ್ದ ಕಾರಣ ಆಧಾರ್ ಕಾರ್ಡ್ ಕೋರಿ ಆದೇಶ ಮಾಡಲಾಗಿತ್ತು ಎಂದು ಸ್ಪಷ್ಟಣೆ ನೀಡಿದರು.
ರಾಜ್ಯದಲ್ಲಿ ಈವರೆಗೆ ಒಟ್ಟು 767.26 ಕೋಟಿ ರೂ.ಗಳಷ್ಟು ಮೊತ್ತದ ಮದ್ಯ ಮಾರಾಟವಾಗಿದ್ದು, ದೊಡ್ಡ ಮೊತ್ತದ ಹಣ ರಾಜ್ಯ ಸರಕಾರಕ್ಕೆ ತೆರಿಗೆ ರೂಪದಲ್ಲಿ ಬಂದಿದೆ ಎಂದ ನಾಗೇಶ್, ಈ ವರ್ಷ ಅಬಕಾರಿ ಆದಾಯ ಸುಮಾರು 25 ಸಾವಿರ ಕೋಟಿ ರೂ.ಗಳಷ್ಟು ಬರಲಿದ್ದು, ಸುಮಾರು 2,500 ಕೋಟಿ ರೂ.ಗಳಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲಾಡ್ಜ್, ಬಾರ್ ಮತ್ತು ಕ್ಲಬ್ಗಳಲ್ಲಿ ಮದ್ಯದ ಕೌಂಟರ್ ತೆರೆದು ಪಾರ್ಸಲ್ ಕೊಡಬಹುದು. ಯಾವುದೇ ಕಾರಣಕ್ಕೂ ರೆಸ್ಟೋರೆಂಟ್ಗಳನ್ನು ತೆರೆಯಲು ಅವಕಾಶವಿಲ್ಲ. ಈ ಸಂದರ್ಭದಲ್ಲಿ ಬಾರ್, ಲಾಡ್ಜ್ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸ್ಯಾನಿಟೈಸರ್ ಬಳಕೆ ಮಾಡಬೇಕು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ವಹಿವಾಟು ನಡೆಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಅವರು ಸ್ಪಷ್ಟನೆ ನೀಡಿದರು.
ಲಾಕ್ಡೌನ್ ಸಂದರ್ಭದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಾಜ್ಯಾದ್ಯಂತ ಈವರೆಗೆ 1,200 ಅಕ್ರಮ ಮದ್ಯ ಮಾರಾಟ ಪ್ರಕರಣಗಳು ಪತ್ತೆಯಾಗಿದ್ದು, ತಪ್ಪಿತಸ್ಥರ ವಿರುದ್ಧ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ನಾಗೇಶ್ ಇದೇ ವೇಳೆ ತಿಳಿಸಿದರು.
ಆನ್ಲೈನ್ ಮಾರಾಟ ತಪ್ಪಿಲ್ಲ
ಆನ್ಲೈನ್ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸುವ ಸಂಬಂಧದ ಸುಪ್ರಿಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಆದೇಶದಲ್ಲಿ ಏನಿದೆ ಎಂದು ನಾನು ಇನ್ನೂ ನೋಡಿಲ್ಲ. ಈ ಬಗ್ಗೆ ಮೊದಲಿನಿಂದಲೂ ಚರ್ಚೆ ಇತ್ತು. ಆನ್ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ಯಾವುದೆ ತಪ್ಪಿಲ್ಲ ಎಂಬುದು ನನ್ನ ಅಭಿಪ್ರಾಯ
-ಎಚ್.ನಾಗೇಶ್, ಅಬಕಾರಿ ಸಚಿವ