ಸಂಕಷ್ಟ ತಂದಿಟ್ಟ 'ಸೇವಾ ಸಿಂಧು' ಆನ್ಲೈನ್ ಪೋರ್ಟಲ್ ನೋಂದಣಿ !
"ಅದರ ಬಗ್ಗೆ ಜ್ಞಾನವಿದ್ದಿದ್ದರೆ ಈ ಕೂಲಿ ಕೆಲಸಕ್ಕೆ ಏಕೆ ಬರುತ್ತಿದ್ದೆ ?"
ಬೆಂಗಳೂರು, ಮೇ 10: ಕೊರೋನ ಲಾಕ್ಡೌನ್ ಹಿನ್ನೆಲೆ ಹೊರ ರಾಜ್ಯಕ್ಕೆ ತೆರಳುವ ಹಾಗೂ ರಾಜ್ಯಕ್ಕೆ ಬರುವ ನಾಗರಿಕರಿಗೆ ಸಹಾಯವಾಗಲೆಂದು ಸರಕಾರ ತೆರೆದಿರುವ 'ಸೇವಾ ಸಿಂಧು' ಆನ್ಲೈನ್ ಪೋರ್ಟಲ್ ನೋಂದಣಿ ಹಲವರಿಗೆ ಸಂಕಷ್ಟ ತಂದಿಟ್ಟಿದೆ.
ರಾಜ್ಯದಲ್ಲಿ ಉಳಿದುಕೊಂಡಿರುವ ಹೊರ ರಾಜ್ಯದ ವಲಸೆ ಕಾರ್ಮಿಕರು ವಿದ್ಯಾರ್ಥಿಗಳು, ಪ್ರವಾಸಿಗರು, ಯಾತ್ರಿಗಳು ತಮ್ಮ ಸ್ವಂತ ಗ್ರಾಮಗಳಿಗೆ ಪ್ರಯಾಣ ವೆಚ್ಚ ಭರಿಸಿ ಹೋಗಲು ಇಚ್ಛಿಸುವವರು ಮತ್ತು ಹೊರ ರಾಜ್ಯಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವವರು ರಾಜ್ಯಕ್ಕೆ ಆಗಮಿಸಲು ಇಚ್ಛಿಸುವವರು ಸೇವಾ ಸಿಂಧು ಆನ್ಲೈನ್ ಪೋರ್ಟಲ್ನಲ್ಲಿ ನೋಂದಾಯಿಸಲು ಕಡ್ಡಾಯಗೊಳಿಸಲಾಗಿದೆ. ಆದರೆ, ಆನ್ಲೈನ್ನಲ್ಲಿ ಫಾರಂ ಭರ್ತಿ ಮಾಡುವುದು ಹಲವರಿಗೆ ಸಾಧ್ಯವಾಗದ ಹಿನ್ನೆಲೆ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸರಕಾರವು ಸೇವಾ ಸಿಂಧು ಆನ್ಲೈನ್ ಪೋರ್ಟಲ್ https://sevasindhu.karnataka.gov.in ಈ ಲಿಂಕ್ ಅನ್ನು ಬಳಸಿ ಅಥವಾ ಈ ಸೇವಾ ಸಿಂಧು ಕೇಂದ್ರಗಳಾದ ಕರ್ನಾಟಕ ಓನ್ ಕೇಂದ್ರ, ಎಲ್ಲ ತಹಶೀಲ್ದಾರ್ ಗಳ ಕಾರ್ಯಾಲಯ, ಎಲ್ಲ ನಾಡ ಕಚೇರಿಗಳು, ಎಲ್ಲ ಪುರಸಭೆ ಅಥವಾ ನಗರಸಭೆ, ಜಿಲ್ಲೆಯ ನಾಗರಿಕ ಸೇವಾ ಕೇಂದ್ರಗಳು (ಸಿ.ಎಸ್.ಸಿ. ಸೆಂಟರ್), ಜಿಲ್ಲೆಯ ಗ್ರಾಮ ಪಂಚಾಯತ್ ಗಳಲ್ಲಿರುವ ಎಲ್ಲ ಬಾಪೂಜಿ ಕೇಂದ್ರಗಳು ಈ ಯಾವುದಾದರೂ ಸೇವಾ ಕೇಂದ್ರಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.
ಅರ್ಜಿಯ ಜೊತೆಗೆ ವೋಟರ್ ಐಡಿ ಕಾರ್ಡ್, ಪಾನ್ ಕಾರ್ಡ್, ಪಾಸ್ಪೋರ್ಟ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಯಾವುದಾದರೂ ಒಂದು ಗುರುತಿನ ಚೀಟಿ ಸಲ್ಲಿಸಿ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದಲ್ಲಿ ಕುಟುಂಬದ ಒಂದು ಭಾವಚಿತ್ರವನ್ನು ಕಡ್ಡಾಯವಾಗಿ ಸಲ್ಲಿಸಲು ಸರಕಾರ ತಿಳಿಸಿದೆ. ಆದರೆ, ಈ ಎಲ್ಲ ಅಂಶಗಳನ್ನು ಪೂರ್ತಿ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ. ಅದಕ್ಕಿಂತಲೂ ವಸತಿ, ಊಟವಿಲ್ಲದೆ ಅನಾಥರಾಗಿರುವವರು, ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ಅನಕ್ಷರಸ್ಥ ವಲಸೆ ಕೂಲಿ ಕಾರ್ಮಿಕರಿಗೆ ಆನ್ಲೈನ್ನಲ್ಲಿ ಭರ್ತಿ ಮಾಡಲು ಹಾಗೂ ಕಚೇರಿಗಳಿಗೆ ಹೋಗಿ ನೋಂದಾವಣಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ನಾನು ಎರಡು ತಿಂಗಳಿಂದ ಸರಿಯಾಗಿ ಕೆಲಸವಿಲ್ಲದೆ, ಅನ್ನ, ನೀರಿಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದೇನೆ. ಲಾಕ್ಡೌನ್ ಅವಧಿಯಲ್ಲಿ ಸರಕಾರವು ನಮಗೆ ಯಾವುದೆ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಇದೀಗ ಊರಿಗೆ ಹೋಗಲು ಆನ್ಲೈನ್ ಅರ್ಜಿ ಹಾಕಬೇಕು ಎಂದರೆ, ಫೋನ್ ಇರಬೇಕು, ಫೋನಿಗೆ ನೆಟ್ ಸೌಲಭ್ಯವಿರಬೇಕು, ನನಗೆ ಅದರ ಜ್ಞಾನವಿರಬೇಕು. ಅಷ್ಟೆಲ್ಲ ಇದ್ದಿದ್ದರೆ ಈ ಕೂಲಿ ಕೆಲಸಕ್ಕೆ ಏಕೆ ಬರುತ್ತಿದ್ದೆ. ಏನೋ ಕಷ್ಟವೆಲ್ಲ ಬಡವರಿಗೆ ಎನ್ನುವಂತೆ, ಸರಕಾರದ ಸೌಲಭ್ಯಗಳೂ ನಮಗೆ ಮತ್ತಷ್ಟು ಕಷ್ಟವನ್ನೇ ತರುತ್ತಿವೆ.
-ಭರತ್ ರಾಜ್, ವಲಸೆ ಕಾರ್ಮಿಕ