20 ರೂ. ಗಾಗಿ 4ರ ಹರೆಯದ ಬಾಲಕಿಯನ್ನು ಬಾವಿಗೆ ತಳ್ಳಿ ಹತ್ಯೆಗೈದ ಮಹಿಳೆ
ರಾಜ್ಯದಲ್ಲಿ ನಡೆದ ಘಟನೆ
ಸಾಂದರ್ಭಿಕ ಚಿತ್ರ
ಬೆಳಗಾವಿ, ಮೇ 14: ಮಹಿಳೆಯೊಬ್ಬರು ಕೇವಲ ಇಪ್ಪತ್ತು ರೂಪಾಯಿ ಆಸೆಗೆ 4ರ ಹರೆಯದ ಬಾಲಕಿಯನ್ನು ಬಾವಿಗೆ ತಳ್ಳಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹೊರವಲಯದಲ್ಲಿ ನಡೆದಿದೆ.
ದಿವ್ಯಾ ಉಗಡೆ (4) ಮೃತ ಬಾಲಕಿ. ಪೂಜಾ ದತ್ತಾರಾವ್ ಕಾಂಬಳೆ (25) ಬಾಲಕಿಯನ್ನು ಕೊಲೆಗೈದ ಆರೋಪಿ.
ಮಹಾರಾಷ್ಟ್ರದ ವಾಸಿಂ ಜಿಲ್ಲೆಯ ಕಬ್ಬು ಕಟಾವು ತಂಡ ಏಳು ತಿಂಗಳ ಹಿಂದೆ ಜಾಗನೂರು ಗ್ರಾಮದಲ್ಲಿ ನೆಲೆಸಿದ್ದು, ಲಾಕ್ಡೌನ್ ಜಾರಿಯಾದ ಕಾರಣ ಊರಿಗೆ ತೆರಳಲು ಸಾಧ್ಯವಾಗದೆ ಇಲ್ಲಿಯೇ ಉಳಿದುಕೊಂಡಿತ್ತು. ಜೊತೆಗೆ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಹಣದ ತೊಂದರೆಯನ್ನು ಎದುರಿಸುವಂತಾಗಿತ್ತು.
ಈ ಮಧ್ಯೆ ಇಂದು ದಿವ್ಯಾ ಉಗಡೆ ಎಂಬ 4 ವರ್ಷದ ಬಾಲಕಿಯ ಕೈಗೆ ಆಕೆಯ ಪೋಷಕರು 20 ರೂ. ನೋಟು ಕೊಟ್ಟು ಅಂಗಡಿಗೆ ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ಇದನ್ನು ನೋಡಿದ ಪೂಜಾ ದತ್ತಾರಾವ್ ಕಾಂಬಳೆ ಬಾಲಕಿಯನ್ನು ಗ್ರಾಮದ ಹೊರ ವಲಯಕ್ಕೆ ಕರೆದುಕೊಂಡು ಹೋಗಿ 20 ರೂ. ಕಸಿದಿದ್ದಾಳೆ. ಈ ವೇಳೆ ದಿವ್ಯಾ ಉಗಡೆ ಜೋರಾಗಿ ಕೂಗಿದ್ದು, ಈ ಸಂದರ್ಭ ಹೆದರಿದ ಪೂಜಾ ಬಾಲಕಿಯನ್ನು ಬಾವಿಗೆ ತಳ್ಳಿ ಹತ್ಯೆಗೈದಿದ್ದಾಳೆ ಎಂದು ತಿಳಿದುಬಂದಿದೆ.
ಈ ಸಂಬಂಧ ಆರೋಪಿ ಮಹಿಳೆಯನ್ನು ಬಂಧಿಸಲಾಗಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.