ಸಾವರ್ಕರ್ ಗೆ ವಿರೋಧ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅವಮಾನ: ಪ್ರಹ್ಲಾದ್ ಜೋಶಿ
ಬೆಂಗಳೂರು, ಮೇ 27: ಸ್ವಾತಂತ್ರ್ಯ ವೀರ ಸಾವರ್ಕರ್ ಅವರಿಗೆ ವಿರೋಧ ಮಾಡುವುದು ಈ ಮಣ್ಣಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅವಮಾನ. ಮುಖ್ಯಮಂತ್ರಿ ಯಡಿಯೂರಪ್ಪ ಪ್ರಬುದ್ಧ ಆಡಳಿತಗಾರರು, ಜನರೇ ಅವರ ಸೂತ್ರದಾರರು. ದೇಶದ ವಿವಿಧೆಡೆ ವೃತ್ತ, ಕಟ್ಟಡ, ಸಂಸ್ಥೆಗಳಿಗೆ ನೆಹರೂ, ನಕಲಿ ಗಾಂಧಿಗಳ ನಾಮಕರಣವೇ ಸ್ವಾತಂತ್ರ್ಯ ಹೋರಾಟಗಾರರಿಗೆ ನಾಮದಾರ್ ಪಾರ್ಟಿ ಸಲ್ಲಿಸಿದ ಕೊಡುಗೆ' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ತಿರುಗೇಟು ನೀಡಿದ್ದಾರೆ.
ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ನಿಮ್ಮ ಪಕ್ಷ ಎಷ್ಟು ಕಡೆ ನೆಹರೂ, ನಕಲಿ ಗಾಂಧಿಗಳ ನಾಮಕರಣ ಮಾಡಿದೆ ಎಂದು ನಿಮಗೆ ವಿವರ ಕೊಡಬಲ್ಲೆ, ಎಷ್ಟು ಕಡೆ ಸರ್ದಾರ ಪಟೇಲ್, ತಿಲಕ್, ನೇತಾಜಿ ಸುಭಾಷ್ ಚಂದ್ರಭೋಸ್, ಭಗತ್ ಸಿಂಗ್, ಚಂದ್ರಶೇಖರ್ ಆಝಾದ್ ಮೊದಲಾದವರ ನಾಮಕರಣ ನಿಮ್ಮ ಪಕ್ಷ ಮಾಡಿದೆ ಎಂದು ವಿವರ ಕೊಡಿ' ಎಂದು ಆಗ್ರಹಿಸಿದ್ದಾರೆ.
'ವೀರ ಸಾವರ್ಕರ್ ಬಗ್ಗೆ ಮೊದಲು ಅರಿತು, ತಿಳಿದು ನಂತರ ಮಾತನಾಡಿ, ತುಷ್ಟೀಕರಣ ಮತಬ್ಯಾಂಕ್ ಗುಂಗಿನಿಂದ ಹೊರಗೆ ಬನ್ನಿ ನಾಮದಾರ್ ಸಿದ್ದರಾಮಯ್ಯನವರೇ' ಎಂದು ಪ್ರಹ್ಲಾದ್ ಜೋಶಿ, ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ರಾಜ್ಯ ಸರಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯನವರನ್ನು ಲೇವಡಿ ಮಾಡಿದ್ದಾರೆ.