ವಿದ್ಯುತ್ ಬಿಲ್ ಏರಿಕೆ, ಖಾಸಗೀಕರಣ ಖಂಡಿಸಿ ಮೈಸೂರು ಕನ್ನಡ ವೇದಿಕೆ ಪ್ರತಿಭಟನೆ
ಮೈಸೂರು,ಜೂ.3: ವಿದ್ಯುತ್ ಬಿಲ್ ಏರಿಕೆ ಹಾಗೂ ಖಾಸಗೀಕರಣವನ್ನು ಖಂಡಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಯಡಿಯೂಪ್ಪರವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ, ರಾಜ್ಯದ ಜನತೆ ಈಗಾಗಲೇ ಕೋವಿಡ್-19ಗೆ ತತ್ತರಿಸಿದ್ದು, ರಾಜ್ಯದ ಜನತೆಗೆ ರಾಜ್ಯ ಸರ್ಕಾರ ವಿದ್ಯುತ್ ಬಿಲ್ನ್ನು ಏರಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದೇ ಸರ್ಕಾರ ಒಂದು ಕಡೆ ಬಡವರ ಹಾಗೂ ಮಧ್ಯಮ ವರ್ಗದವರ ಮೇಲೆ ಅನುಕಂಪದ ಮಾತುಗಳನ್ನು ಆಡುತ್ತಾ ಇನ್ನೊಂದೆಡೆ ಜನಪರ ಯೋಜನೆಗಳನ್ನು ನೀಡುತ್ತೇವೆ ಎಂದು ಬೊಬ್ಬೆ ಹೊಡೆಯುತ್ತಾ ಮತ್ತೊಂದೆಡೆ ವಿದ್ಯುತ್ ಬಿಲ್ನ್ನು ಏರಿಕೆ ಮಾಡುತ್ತಿರುವುದು ರಾಜ್ಯ ಸರ್ಕಾರದ ದ್ವಂದ ನೀತಿ ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದರು.
ರಾಜ್ಯದ ಜನತೆ ಆವೈಜ್ಞಾನಿಕ ವಿದ್ಯುತ್ ಬಿಲ್ನ ವಿರುದ್ಧ ತಮ್ಮ ಅಸಮಧಾನ ವ್ಯಕ್ತಪಡಿಸಿದರೂ ಕೂಡ ಇದ್ಯಾವುದನ್ನು ಗಣೆನೆಗೆ ತೆಗೆದುಕೊಳ್ಳದೆ ಬಿಲ್ ಏರಿಕೆ ಮಾಡಿರುವುದು ಬಡವರು ಹಾಗೂ ಮಧ್ಯಮ ವರ್ಗದವರ ಬೆನ್ನಿಗೆ ಚೂರಿ ಹಾಕಿದಂತಾಗಿದೆ. ಸಾಮನ್ಯ ಜನರ ಆರ್ಥಿಕ ಸಂಕಷ್ಟವನ್ನು ಅರ್ಥಮಾಡಿಕೊಳ್ಳದ ಇಂಥ ಸರ್ಕಾರಗಳು ಪ್ರಜಾಪ್ರಭುತ್ವದ ಅನುಗುಣವಾಗಿ ಜನರ ಆಶೋತ್ತರಗಳಿಗೆ ತಕ್ಕಂತೆ ನಡೆಯುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತು ವಿದ್ಯುತ್ ಬಿಲ್ನ್ನು ಮತ್ತೊಮ್ಮೆ ದರ ಪರಿಷ್ಕರಣೆ ಮಾಡುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗುವುದರಿಂದ ತಪ್ಪಿಸಿಕೊಳ್ಳಬೇಕು. ಬಡವರು ಹಾಗೂ ಮಧ್ಯಮ ವರ್ಗದವರು ತಮ್ಮ ದಿನನಿತ್ಯದ ಬದುಕನ್ನು ಸಾಗಿಸಲು ಕಷ್ಟ ಪಡುತ್ತಿರುವಾಗ ಇವೆಲ್ಲವೂ ಸರ್ಕಾರಕ್ಕೆ ಅರಿವಿದ್ದರೂ ದುರುದ್ದೇಶದ ಮೂಲಕ ಆರ್ಥಿಕ ಹೊರೆ ಹೇರುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಸರ್ಕಾರ ಕೂಡಲೇ ಈ ಜನವಿರೋಧಿ ನಿರ್ಧಾರವನ್ನು ವಾಪಸ್ ಪಡೆಯಬೇಕು ಹಾಗೂ ಹಿಂದೆ ಬರುತ್ತಿದ್ದ ಬಿಲ್ನ ಯಥಾಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ಯಾಲೇಸ್ ಬಾಬು, ರಾಧಕೃಷ್ಣ, ರಮೇಶ್, ಜಗದೀಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.