ಇನ್ನೂ ಒಂದು ತಿಂಗಳು ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ಇಲ್ಲ: ಮಡಿಕೇರಿ ಜಮಾಅತ್ ಒಕ್ಕೂಟ ತೀರ್ಮಾನ
ಮಡಿಕೇರಿ, ಜೂ.6: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ಧಾರ್ಮಿಕ ಕೇಂದ್ರಗಳನ್ನು ತಾತ್ಕಾಲಿಕ ನಿರ್ಬಂಧಿಸಿ ಆದೇಶಿಸಿದ್ದ ಕೇಂದ್ರ ಮತ್ತು ರಾಜ್ಯ ಸರಕಾರ ಜೂ.8ರಿಂದ ಮತ್ತೆ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿದೆ. ಆದರೆ ಸುರಕ್ಷತಾ ದೃಷ್ಟಿಯಿಂದ ಇನ್ನೂ ಒಂದು ತಿಂಗಳುಗಳ ಕಾಲ ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ಪ್ರಾರಂಭಿಸದಿರಲು ಮಡಿಕೇರಿ ಜಮಾಅತ್ ಒಕ್ಕೂಟ ತೀರ್ಮಾನಿಸಿದೆ.
ಲಾಕ್ಡೌನ್ ನಿಂದಾಗಿ ಇದುವರೆಗೆ ಸುಮಾರು ಎರಡು ತಿಂಗಳು ಮಸೀದಿಗಳು ಬಂದ್ ಆಗಿತ್ತು. ಪವಿತ್ರ ರಮಝಾನ್ ತಿಂಗಳಲ್ಲೂ ಮಸೀದಿಯಲ್ಲಿನ ಆರಾಧನೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಸರಕಾರ ಪ್ರಾರ್ಥನಾ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಿದೆ. ಆದರೆ, ಸುರಕ್ಷತಾ ದೃಷ್ಟಿಯಿಂದ ಮುಂದಿನ ಒಂದು ತಿಂಗಳ ಕಾಲ ಮಸೀದಿಗಳಲ್ಲಿ ಸಾಮೂಹಿಕ ನಮಾಝ್ ಪ್ರಾರಂಭಿಸದಿರಲು ನಗರದ ಎಲ್ಲಾ ಹತ್ತು ಮಸೀದಿಗಳ ಆಡಳಿತ ಮಂಡಳಿ ತೀರ್ಮಾನಿಸಿದೆ.
ಮಡಿಕೇರಿ ಕ್ರೆಸೆಂಟ್ ಶಾಲೆಯ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಜಮಾಅತ್ ಒಕ್ಕೂಟದ ಅಧ್ಯಕ್ಷ ಜಿ.ಹೆಚ್ ಮುಹಮ್ಮದ್ ಹನೀಫ್ ರವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ನಗರದ ಎಲ್ಲಾ ಮಸೀದಿಗಳ ಧರ್ಮ ಗುರುಗಳು, ಮಸೀದಿಗಳ ಅಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.