ಕೆಎಸ್ಆರ್ಟಿಸಿಯ ಎಲ್ಲಾ ಸಿಬ್ಬಂದಿಗೆ ಕೊರೋನ ಪರೀಕ್ಷೆ
ಬೆಂಗಳೂರು, ಜೂ.27: ಕೊರೋನ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ತನ್ನ ಎಲ್ಲ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಕೊರೋನ ತಪಾಸಣೆ ಮಾಡಲು ತೀರ್ಮಾನಿಸಿದೆ.
ನಿರಂತರವಾಗಿ ಸಾರ್ವಜನಿಕ ಪ್ರಯಾಣಿಕರ ಸಂಪರ್ಕದಲ್ಲಿರುವ ನಿಗಮದ ಚಾಲಕ, ನಿರ್ವಾಹಕರು ಮತ್ತು ಬಸ್ಸು ನಿಲ್ದಾಣಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳನ್ನು ಕಡ್ಡಾಯವಾಗಿ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲು ಉದ್ದೇಶಿಸಲಾಗಿದ್ದು, ಆರಂಭಿಕವಾಗಿ ನಿಲ್ದಾಣಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಕೊರೋನ ಪರೀಕ್ಷೆ ಮಾಡಲಾಗುತ್ತದೆ. ಹಾಗೆಯೇ ಎಲ್ಲ ಚಾಲಕರು ನಿರ್ವಾಹಕರ ಗಂಟಲು ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಪಾಸಿಟಿವ್ ಬಂದಲ್ಲಿ ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಬಹುದಾಗಿದೆ ಎಂಬುದು ಕೆಎಸ್ಆರ್ಟಿಸಿ ಉದ್ದೇಶ.
ಯಾರಿಗಾದರೂ ಸೋಂಕು ಬಂದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಾಗುವಂತೆ ನೋಡಿಕೊಳ್ಳುವುದಲ್ಲದೆ, ಅವರ ಜೊತೆ ಸಂಪರ್ಕದಲ್ಲಿದ್ದವರನ್ನು ಕೂಡಲೇ ಕ್ವಾರಂಟೈನ್ಗೆ ಒಳಪಡಿಸಿ ಅವರ ಗಂಟಲು ದ್ರವವನ್ನೂ ಕೂಡಾ ಪರೀಕ್ಷೆ ಮಾಡಿಸಿ ಸೋಂಕು ಮತ್ತಷ್ಟು ಹರಡುವುದನ್ನು ತಡೆಗಟ್ಟಬಹುದು.
ಈ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಘಟಕಗಳಲ್ಲಿನ ಸಿಬ್ಬಂದಿ, ಚಾಲಕರು, ನಿರ್ವಾಹಕರು ಹಾಗೂ ಅಧಿಕಾರಿಗಳ ಗಂಟಲು ದ್ರವ ಸಂಗ್ರಹವನ್ನು ಕಡ್ಡಾಯವಾಗಿ ಮಾಡುವುದಕ್ಕೆ ಸಂಬಂಧಿಸಿದಂತೆ ಎಲ್ಲ ಘಟಕಗಳ ವ್ಯವಸ್ಥಾಪಕರಿಗೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸೂಚಿಸಿದ್ದಾರೆ.