ದಾವಣಗೆರೆ: ಕೊರೋನದಿಂದ ಮೃತಪಟ್ಟ ವೃದ್ದೆಯ ಮೃತದೇಹವನ್ನು ಜೆಸಿಬಿ ಬಳಸಿ ಗುಂಡಿಗೆ ಎಸೆದರು!
ಅಧಿಕಾರಿಗಳಿಗೆ ನೋಟಿಸ್
ದಾವಣಗೆರೆ: ಕೋವಿಡ್-19ನಿಂದ ಮೃತಪಟ್ಟ ವೃದ್ದೆಯ ಅಂತ್ಯಸಂಸ್ಕಾರವನ್ನು ಜೆಸಿಬಿ ಬಳಸಿ ಗುಂಡಿಗೆ ಎಸೆದಿದ್ದಾರೆನ್ನಲಾದ ಘಡನೆ ಚನ್ನಗಿರಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಚನ್ನಗಿರಿ ತಾಲೂಕಿನ ಕುಂಬಾರ ಬೀದಿಯ ಮಹಿಳೆ 56 ವರ್ಷದ ಮಹಿಳೆಯೊಬ್ಬರು ಉಸಿರಾಟದ ತೊಂದರೆಯಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಅವರಿಗೆ ಕೊರೋನ ಸೋಂಕು ಇರುವುದು ಕೂಡ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರ ಅಂತ್ಯಸಂಸ್ಕಾರವನ್ನು ಚನ್ನಗಿರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಮಾಡಲಾಗಿತ್ತು.
ಮೃತ ಮಹಿಳೆಯ ಶವಸಂಸ್ಕಾರಕ್ಕೆ ಅಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿ ಅನುಸರಿಸಿದ ಕ್ರಮ ಅಮಾನವೀಯವಾಗಿದೆ. ಜೆಸಿಬಿ ಮೂಲಕ ಮೃತದೇಹವನ್ನು ಎತ್ತಿಕೊಂಡು ಹೋಗಿ ಎಸೆದು ಮಣ್ಣುಮುಚ್ಚಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯ ವೀಡಿಯೋ ಇದೀಗ ವೈರಲ್ ಆಗಿದೆ.
ಅಧಿಕಾರಿಗಳಿಗೆ ನೋಟಿಸ್
ಜೆಸಿಬಿ ಮೂಲಕ ಸೋಂಕಿತ ವೃದ್ದೆಯ ಅಂತ್ಯಸಂಸ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೋಟೀಸ್ ಜಾರಿ ಮಾಡಿದ್ದಾರೆ.
ವರದಿ ಬಳಿಕ ಎಚ್ಚೆತ್ತಕೊಂಡ ಅವರು, ತಾಲ್ಲೂಕು ತಹಶೀಲ್ದಾರ್, ತಾಲ್ಲೂಕು ಆರೋಗ್ಯಾಧಿಕಾರಿ, ಪುರಸಭೆ ಮುಖ್ಯ ಅಧಿಕಾರಿ ನೋಡಲ್ ಆಫಿಸರ್ ಗೆ ನೋಟೀಸ್ ನೀಡಿದ್ದಾರೆ.
ಮಾರ್ಗದರ್ಶಿ ಸೂತ್ರಗಳ ಅನ್ವಯ ಅಂತ್ಯಕ್ರಿಯೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.