ದೋಷಪೂರಿತ ಪಿಪಿಇ ಕಿಟ್, ಮಾಸ್ಕ್ ಬಗ್ಗೆ ತನಿಖೆಗೆ ಆದೇಶ: ಸಚಿವ ಡಾ.ಕೆ.ಸುಧಾಕರ್
Photo: Twitter
ಬೆಂಗಳೂರು, ಜು. 4: ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಕೋವಿಡ್ ಕೇರ್ ಸೆಂಟರ್ ಮತ್ತು ಆಸ್ಪತ್ರೆಗಳ ನಿರ್ವಹಣೆ, ಸಂಪರ್ಕ ಪತ್ತೆ, ಪರೀಕ್ಷೆ ಮತ್ತು ಸಮುದಾಯದ ಸಂಘಟನೆಗೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಾಲ್ಕು ರಾಜ್ಯ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ' ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾರ್ ತಿಳಿಸಿದ್ದಾರೆ.
ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ಈ ಸಮಿತಿಗಳು ಬಿಬಿಎಂಪಿ ಮತ್ತು ಜಿಲ್ಲಾ ಮಟ್ಟದ ಕಾರ್ಯ ತಂಡಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ. ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಕಣ್ಗಾವಲು ಮತ್ತು ಸಾರ್ವಜನಿಕರ ಸುರಕ್ಷತಾ ಆರೋಗ್ಯ ಕ್ರಮಗಳ ಸಮರ್ಪಕ ಜಾರಿಗಾಗಿ ಪ್ರತಿ ಜಿಲ್ಲೆಯಲ್ಲೂ 14 ಕಾರ್ಯತಂಡಗಳನ್ನು ರಚಿಸಲು ನಿರ್ಧರಿಸಲಾಗಿದೆ. ಈ ತಂಡಗಳ ಸಂಘಟಿತ ಹಾಗೂ ಸಮನ್ವಯ ಕಾರ್ಯನಿರ್ವಹಣೆಯ ಉಸ್ತುವಾರಿಯನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ' ಎಂದು ಹೇಳಿದ್ದಾರೆ.
ಕೋವಿಡ್ ವಿರುದ್ಧ ನಮ್ಮ ವೈದ್ಯರು ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ವೀರಯೋಧರು. ಅವರ ಸುರಕ್ಷತೆಗೆ ಎಲ್ಲ ಅಗತ್ಯ ಕ್ರಮಗಳನ್ನು ರಾಜ್ಯ ಸರಕಾರ ಕೈಗೊಂಡಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರಿಗೆ ದೋಷಪೂರಿತ ಪಿಪಿಇ ಕಿಟ್, ಎನ್-95 ಮಾಸ್ಕ್ ಕುರಿತ ದೂರಿನ ಬಗ್ಗೆ ನಾನೀಗಾಗಲೇ ತನಿಖೆಗೆ ಆದೇಶಿಸಿದ್ದೇನೆ. ಆರೋಪ ಸಾಬೀತಾದಲ್ಲಿ ಆಡಳಿತ ಮಂಡಳಿ ಹೊಣೆಗಾರರಾಗುತ್ತಾರೆ'
-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ