ಮೈಸೂರು: ದ್ವಿಚಕ್ರ ವಾಹನಗಳಿಗೆ ಲಾರಿ ಢಿಕ್ಕಿ; ಯುವಕ ಮೃತ್ಯು
ಮೈಸೂರು,ಜು.4: ಲಾರಿಯೊಂದು ಎರಡು ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮೈಸೂರು-ಮಾನಂದವಾಡಿ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಹೆಚ್.ಡಿ.ಕೋಟೆ ತಾಲೂಕಿನ ಕಾರೆಹುಂಡಿ ಗ್ರಾಮದ ಸಂಜಯ (24) ಎಂದು ಗುರುತಿಸಲಾಗಿದೆ. ಸಂಜಯ ತನ್ನ ಸ್ನೇಹಿತನೊಂದಿಗೆ ಮೈಸೂರು ಕಡೆಯಿಂದ ಹೆಚ್.ಡಿ.ಕೋಟೆ ಕಡೆಗೆ ತೆರಳುತ್ತಿರುವಾಗ ಎದುರಿನಿಂದ ಬಂದ ಕೇರಳ ನೋಂದಾಯಿತ ಲಾರಿಯೊಂದು ಢಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಸಂಜಯ ಮೃತಪಟ್ಟಿದ್ದಾರೆ.
ಇದೇ ಲಾರಿ ಮೈಸೂರು ಕಡೆಯಿಂದ ಹೋಗುತ್ತಿದ್ದ ಮತ್ತೊಂದು ಬೈಕಿಗೂ ಢಿಕ್ಕಿ ಹೊಡೆದಿದೆ. ಮೃತರ ಬೈಕ್ ನ ಹಿಂಬದಿ ಸವಾರ ಮತ್ತು ಮತ್ತೊಂದು ಬೈಕ್ ನ ಸವಾರ ಗಾಯಗೊಂಡಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story