ಕಲಬುರಗಿ ಬಂದೇ ನವಾಜ್ ದರ್ಗಾ ಆವರಣದಲ್ಲಿ ಉರುಸ್ ಸರಳವಾಗಿ ಆಚರಿಸಲು ತೀರ್ಮಾನ
ಕಲಬುರ್ಗಿ, ಜು.5: ಪ್ರತಿಬಾರಿ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದ ಕಲಬುರ್ಗಿಯ ಭಾವೈಕ್ಯತೆಯ ಕೇಂದ್ರ ಖ್ವಾಜಾ ಬಂದೇ ನವಾಜ್ ದರ್ಗಾದ ಉರುಸ್ ಸಂಭ್ರಮದ ಮೇಲೆ ಕೊರೋನ ಕಾರ್ಮೋಡ ಕವಿದಿದ್ದು, ಕೊರೋನ ಭೀತಿ ಹಿನ್ನೆಲೆಯಲ್ಲಿ ಉರುಸ್ ಸರಳವಾಗಿ ಆಚರಿಸಲು ದರ್ಗಾದ ಆಡಳಿತ ಮಂಡಳಿ ತೀರ್ಮಾನಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ದರ್ಗಾದ ಪೀಠಾಧಿಪತಿ ಸೈಯದ್ ಖುಸ್ರೂ ಹುಸ್ಸೇನಿ, ಪ್ರತಿ ವರ್ಷ ಅದ್ಧೂರಿಯಾಗಿ ಉರುಸ್ ಸಂಭ್ರಮವನ್ನು ಆಚರಿಸಲಾಗುತ್ತಿತ್ತು. ಆದರೆ, ಕೊರೋನ ಹಿನ್ನೆಲೆಯಲ್ಲಿ ಈ ಬಾರಿ ಸಂದಲ್ ಮೆರವಣಿಗೆ ನಡೆಸುವುದಿಲ್ಲ ಎಂದಿದ್ದಾರೆ. ಸಾರ್ವಜನಿಕ ಉದ್ಯಾನವನದಿಂದ ನಡೆಯುತ್ತಿದ್ದ ಮೆರವಣಿಗೆಯಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಭಾಗಿಯಾಗುತ್ತಿದ್ದರು. ಕೊರೋನ ಹಿನ್ನೆಲೆಯಲ್ಲಿ ಸಂದಲ್ ಮೆರವಣಿಗೆ ನಡೆಸುವುದಿಲ್ಲ ಎಂದು ತಿಳಿಸಿದರು.
ಉರುಸ್ ಅಂಗವಾಗಿ ಪ್ರತಿ ವರ್ಷ ನಡೆಯುತ್ತಿದ್ದ ಅಖಿಲ ಭಾರತ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಒಂದು ತಿಂಗಳ ಕಾಲ ನಡೆಯುತ್ತಿತ್ತು. ಉರುಸ್ ಹಿನ್ನೆಲೆಯಲ್ಲಿ ಜು.6ರ ಸಂಜೆ 4 ಗಂಟೆಯಿಂದ ಜು.10ರ ಸಂಜೆ 4ಗಂಟೆಯವರೆಗೆ ಸಾರ್ವಜನಿಕ ದರ್ಶನ ನಿರ್ಬಂಧಿಸಲಾಗಿದೆ.