ಕೋವಿಡ್ ಹೆಸರಿನಲ್ಲಿ ನಡೆಯುವ ದಂಧೆ ನಿಲ್ಲಿಸದಿದ್ದರೆ ಹೋರಾಟ: ಎಸ್ಡಿಪಿಐ ಎಚ್ಚರಿಕೆ
ಬೆಂಗಳೂರು, ಜು.11: ಕೋವಿಡ್ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳು ನಡೆಸುತ್ತಿರುವ ದಂಧೆ ಮತ್ತು ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆಯನ್ನು ಸರಕಾರ ತಕ್ಷಣ ಸರಿಪಡಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ) ಎಚ್ಚರಿಸಿದೆ.
ದೇಶಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು ನಮ್ಮ ರಾಜ್ಯದಲ್ಲೂ ರೋಗವು ವ್ಯಾಪಕವಾಗಿ, ಸಾಮುದಾಯಿಕವಾಗಿ ಹರಡುತ್ತಿದೆ. ಕೊರೋನ ಪೀಡಿತರಾಗಿ ಮರಣ ಹೊಂದುತ್ತಿರುವವರ ಸಂಖ್ಯೆಯೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅನೇಕ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವಾರು ಮಂದಿ ಹೋಮ್ ಕ್ವಾರಂಟೈನ್ನಲ್ಲಿದ್ದಾರೆ. ಅನೇಕ ಪ್ರದೇಶಗಳು ಸೀಲ್ಡೌನ್ ಆಗಿ ಸಂದಿಗ್ಧವಾದ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದೇ ಸಮಯದಲ್ಲಿ ಸರಕಾರ ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಚಿಕಿತ್ಸೆಗೆ ಅನುಮತಿ ನೀಡಿದ ಬಳಿಕ ಖಾಸಗಿ ಆಸ್ಪತ್ರೆಗಳು ಹಣ ದೋಚುವ ದಂಧೆ ಶುರು ಮಾಡಿದ್ದು ಜನರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ಖಾಸಗಿ ಆಸ್ಪತ್ರೆಗಳು ಕೋವಿಡ್ ಪರೀಕ್ಷೆಗಾಗಿರೂ 4,500 ರೊಂದಿಗೆ ವೈದ್ಯರುಗಳ ಪಿಪಿಇ ಕಿಟ್ ಎಂದು ರೂ. 8,000ಕ್ಕೂ ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿವೆ. ರೋಗಿಗಳಿಗೆ ದಿವಸಕ್ಕೆ 15 ರಿಂದ 20 ಸಾವಿರ ದುಬಾರಿ ಬೆಲೆ ಹಾಕಿ ಕೊರೋನ ವ್ಯಾಪಾರ ನಡೆಸುತ್ತಿರುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಬೆಂಗಳೂರಿನಲ್ಲಂತೂ ಸಾಮಾನ್ಯ ಕಾಯಿಲೆಗೂ ಚಿಕಿತ್ಸೆ ನೀಡಲು ಆಸ್ಪತ್ರೆಗಳು ತಿರಸ್ಕರಿಸುತ್ತಿರುವುದು ವರದಿಯಾಗುತ್ತಿದೆ. ಬಿಬಿಎಂಪಿಯಿಂದ ಲೆಟರ್ ತಂದರೆ ಮಾತ್ರ ಸೇರಿಸಿಕೊಳ್ಳುವುದು ಎಂಬ ಉಡಾಫೆಯ ಮಾತುಗಳು ಜನರಿಗೆ ತುರ್ತುಚಿಕಿತ್ಸೆ ಸಿಗದೆ ಪರದಾಡುವಂತೆ ಮಾಡಿದೆ. ಕಳೆದ ಒಂದು ವಾರದಿಂದೀಚೆ ಸಾಮಾಜಿಕ ಜಾಲತಾಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಅನೇಕ ಚರ್ಚೆಗಳು ನಡೆದು ಆಕ್ರೋಶಗಳು ವ್ಯಕ್ತವಾಗುತ್ತಿವೆ. ಖಾಸಗಿ ಆಸ್ಪತ್ರೆಗಳ ದಂಧೆಗಳ ಬಗ್ಗೆ ಮತ್ತು ಲ್ಯಾಬ್ ಟೆಸ್ಟ್ ಕುರಿತಾದ ಅನುಮಾನಗಳ ಅನುಭವವನ್ನು ಜನರು ಹಂಚಿಕೊಳ್ಳುತ್ತಿದ್ದಾರೆ.
ಕಾಲು ನೋವು, ಹೆರಿಗೆ ಅಥವಾ ಯಾವುದೇ ಸಣ್ಣಪುಟ್ಟ ಖಾಯಿಲೆಗಳಿಗೆ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗಳಿಗೆ ತೆರಳಿದರೆ ಒತ್ತಾಯಪೂರ್ವಕವಾಗಿ ಕೊರೋನ ಪರೀಕ್ಷೆ ಮಾಡಿಸುತ್ತಿರುವುದಲ್ಲದೆ ಹೆಚ್ಚಿನ ಪ್ರಮಾಣದ ರೋಗಿಗಳ ವರದಿಗಳು ಪಾಸಿಟಿವ್ ಬರುತ್ತಿವೆ, ಮಾತ್ರವಲ್ಲದೆ ಬೆಳಿಗ್ಗೆ ನೆಗೆಟಿವ್ ಬಂದ ಪ್ರಕರಣಗಳು ಮಧ್ಯಾಹ್ನದ ವೇಳೆಯಲ್ಲಿ ನಿಮ್ಮ ವರದಿ ಪಾಸಿಟಿವ್ ಆಗಿದೆ ಎಂಬಂತಹ ಗೊಂದಲಕಾರಿಯಾದಂತಹ ವರದಿಗಳು ಕೇಳಿ ಬರುತ್ತಿವೆ ಎಂದು ಎಸ್ಡಿಪಿಐ ದೂರಿದೆ.
ಕೆಲವು ಪ್ರಕರಣಗಳಲ್ಲಿ ಆಸ್ಪತ್ರೆಯಲ್ಲಿ ನೆಗೆಟಿವ್ ವರದಿ ನೀಡಿ ಡಿಸ್ಚಾರ್ಜ್ ಮಾಡಿ ಮನೆಗೆ ಕಳಿಸಿದ ನಂತರ ಕರೆ ಮಾಡಿ ನಿಮ್ಮ ವರದಿ ಪಾಸಿಟಿವ್ ಆಗಿದೆ, ಆಂಬುಲೆನ್ಸ್ ಕಳುಹಿಸುತ್ತೇವೆ ಹೊರಡಲು ತಯಾರಾಗಿ ಎಂಬಂತಹ ಪ್ರಕರಣಗಳು ಹಲವಾರು ಕಡೆ ನಡೆದಿರುವ ಬಗ್ಗೆ ಸ್ವತಃ ಸಂತ್ರಸ್ತರೇ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ರೋಗಿಗಳು ಆಸ್ಪತ್ರೆಗಳಿಗೆ ಹೋಗಲು ಭಯ ಪಟ್ಟು ಮನೆಯಲ್ಲೇ ಉಳಿದು ಜೀವ ಹೋದರೂ ಪರವಾಗಿಲ್ಲ ಅನ್ನುವ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ.
ಕೊರೋನದಂತಹ ಮಾರಕ ವೈರಸ್ನಿಂದ ಜನಸಾಮಾನ್ಯರು ಭಯದಲ್ಲಿ ಮತ್ತು ಆರ್ಥಿಕವಾಗಿ ಅತಂತ್ರವಾಗಿರುವ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಈ ರೀತಿ ಮೆಡಿಕಲ್ ಮಾಫಿಯಾ ನಡೆಸುತ್ತಿರುವುದು ಖಂಡನಾರ್ಹವಾಗಿದೆ. ಇನ್ನು ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆಯಿಂದ ಜನ ರೋಸಿ ಹೋಗಿದ್ದಾರೆ. ಅತ್ಯಂತ ಕಳಪೆ ಆಹಾರ ಪೂರೈಕೆ, ತಡವಾಗಿ ಆಹಾರ ನೀಡುವುದು,ಬಿಸಿನೀರಿನ ಪೂರೈಕೆ ಇಲ್ಲದಿರುವುದು, ನೈರ್ಮಲ್ಯದ ಕೊರತೆ ಇತ್ಯಾದಿಗಳು ಸರಕಾರಿ ಆಸ್ಪತ್ರೆಗಳಲ್ಲಿ ತಾಂಡವವಾಡುತ್ತಿದೆ ಎಂದು ವರದಿಯಾಗುತ್ತಿದೆ. ಆದರೆ ಖಾಸಗಿ ಆಸ್ಪತ್ರೆಗಳು ಹಾಗೂ ಸರಕಾರಿ ಆಸ್ಪತ್ರೆಗಳ ದುರವಸ್ಥೆಯನ್ನು ಕಂಡು ಜನರು ಆತಂಕಕ್ಕೆ ಒಳಗಾಗದೆ ರೋಗ ಲಕ್ಷಣಗಳಿದ್ದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಎಸ್ಡಿಪಿಐ ಜನರಿಗೆ ಕರೆ ನೀಡಿದೆ.