ಹಾಸಿಗೆ-ದಿಂಬು ಬಾಡಿಗೆ ಹಿಂದಿನ ಅಸಲಿಯತ್ತೇನು?: ಈಶ್ವರ್ ಖಂಡ್ರೆ
ಬೆಂಗಳೂರು, ಜು. 14: `ಮುಖ್ಯಮಂತ್ರಿ ಯಡಿಯೂರಪ್ಪನವರನ್ನೇ ಕತ್ತಲಲ್ಲಿಟ್ಟ ಬಿಬಿಎಂಪಿ, ಬಾಡಿಗೆ ಮೇಲೆ ಹಾಸಿಗೆ, ದಿಂಬು ಪಡೆಯಲು ಮುಂದಾಗಿರುವುದರ ಹಿಂದಿನ ಅಸಲಿಯತ್ತೇನಿದೆ ಎನ್ನುವುದನ್ನು ಉತ್ತರಿಸಲಿ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಬಿ.ಖಂಡ್ರೆ ಇಂದಿಲ್ಲಿ ಆಗ್ರಹಿಸಿದ್ದಾರೆ.
ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, `ಕೊರೋನ ಸೋಂಕಿತರಿಗೆ ಹಾಸಿಗೆ ವಿಚಾರದಲ್ಲಿ ರಾಜ್ಯ ಸರಕಾರ ಅಸಹ್ಯ ಹುಟ್ಟಿಸುವ ರೀತಿಯಲ್ಲಿ ವರ್ತನೆ ಮಾಡದಿರಲಿ. ಅಂತರ್ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ(ಬಿಐಇಸಿ) ಕೋವಿಡ್ ಕೇರ್ ಸೆಂಟರ್ ನ ಹಾಸಿಗೆ, ದಿಂಬು ಬಾಡಿಗೆಗಾಗಿ ಸರಕಾರ ಕೋಟಿ ಕೋಟಿ ರೂ.ವೆಚ್ಚ ಮಾಡುವ ಬದಲು ಹೊಸ ಹಾಸಿಗೆಗಳನ್ನು ಖರೀದಿಸಲಿ' ಎಂದು ಸಲಹೆ ಮಾಡಿದ್ದಾರೆ.
`ರಾಜ್ಯ ಸರಕಾರ ಮಹಾಮಾರಿ ಕೊರೋನ ಸೋಂಕು ನಿರ್ವಹಣೆಯಲ್ಲಿ ಇನ್ನಾದರೂ ಪಾರದರ್ಶಕತೆ ಕಾಪಾಡಲಿ. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ರಾಜ್ಯ ಸರಕಾರ ಕೊರೋನ ಸೋಂಕು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿ' ಎಂದು ಈಶ್ವರ್ ಖಂಡ್ರೆ ಒತ್ತಾಯ ಮಾಡಿದ್ದಾರೆ.
Next Story