ಮುಂದಿನ ಸೆಮಿಸ್ಟರ್ ಗಳ ಪರೀಕ್ಷಾ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ: ಡಾ.ಅಶ್ವಥ್ ನಾರಾಯಣ
ಬೆಂಗಳೂರು, ಜು. 15: ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾ ಕೋರ್ಸ್ ಗಳ ಮಧ್ಯಂತರ ಸೆಮಿಸ್ಟರ್ ಗಳ ಪರೀಕ್ಷೆಗಳನ್ನು ಕೋವಿಡ್-19 ಸೋಂಕಿನ ಕಾರಣಕ್ಕೆ ರದ್ದು ಮಾಡಿರುವುದರಿಂದ ಮುಂದಿನ ಸೆಮಿಸ್ಟರ್ ಗಳ ಪರೀಕ್ಷಾ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ಬುಧವಾರ ಈ ಸಂಬಂಧ ಸುತ್ತೋಲೆಯನ್ನು ಎಲ್ಲ ವಿಶ್ವ ವಿದ್ಯಾಲಯಗಳಿಗೆ ಕಳುಹಿಸಲು ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ ಅವರಿಗೆ ಸೂಚಿಸಿದರು. ಕೆಲವು ವಿಶ್ವ ವಿದ್ಯಾಲಯಗಳು ಈಗಾಗಲೇ ಪರೀಕ್ಷಾ ಶುಲ್ಕವನ್ನು ಸಂಗ್ರಹಿಸಿದ್ದು ಅದನ್ನು ವಾಪಸ್ ಕೊಡಿಸಿ ಎನ್ನುವ ಮನವಿ ವಿದ್ಯಾರ್ಥಿಗಳಿಂದ ಬಂದಿತ್ತು.
ಇದಕ್ಕೆ ಸ್ಪಂದಿಸಿದ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರು ಪರೀಕ್ಷೆ ರದ್ದಾಗಿದ್ದರೂ ಮೌಲ್ಯಮಾಪನ ಪ್ರಕ್ರಿಯೆ ಇರುತ್ತದೆ. ಹೀಗಾಗಿ ಮುಂದಿನ ಸೆಮಿಸ್ಟರ್ ಗಳ ಪರೀಕ್ಷಾ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲು ಸೂಚಿಸಲಾಗುವುದು ಎಂದು ತಿಳಿಸಿದರು.