ಕಲಬುರಗಿ: ವೆಂಟಿಲೇಟರ್ ಸಿಗದೆ ಮಹಿಳೆ ಮೃತ್ಯು; ಆರೋಪ
ಕಲಬುರಗಿ, ಜು.28: ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಪಟ್ಟಣದ ಮರಾಠಿ ಗಲ್ಲಿ ಬಡಾವಣೆಯ ಮಹಿಳೆಯೊಬ್ಬರು ವೆಂಟಿಲೇಟರ್ ಸೌಲಭ್ಯ ಸಿಗದೆ ಮಂಗಳವಾರ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಶಾಂತಾಬಾಯಿ ಆಕುಶಖಾನೆ (46) ಮೃತ ಮಹಿಳೆ. ಇವರು ವೆಂಟಿಲೇಟರ್ ಸೌಲಭ್ಯ ಸಿಗದೆ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಎದೆ ನೋವು, ಉಸಿರಾಟದ ತೊಂದರೆ ಹಾಗೂ ಅಧಿಕ ರಕ್ತದೊತ್ತಡ ಕಾಯಿಲೆ ಉಲ್ಬಣಿಸಿದ ಕಾರಣ ಮಹಿಳೆಯನ್ನು ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ನಗರದ ಪ್ರತಿಷ್ಠಿತ ಆಸ್ಪತ್ರೆಗಳು ಸೇರಿದಂತೆ ಇತರ ಖಾಸಗಿ ಆಸ್ಪತ್ರೆಗೆ ಹೋದರೂ ವೆಂಟಿಲೇಟರ್ ಲಭ್ಯವಾಗಲಿಲ್ಲ. ನಂತರ ಬಸ್ ನಿಲ್ದಾಣ ಮುಂಭಾಗದ ಆಸ್ಪತ್ರೆಗೆ ರೋಗಿಯನ್ನು ಸಾಗಿಸಿದ ತಕ್ಷಣವೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ನಗರದ ಪ್ರತಿಷ್ಠಿತ ಆಸ್ಪತ್ರೆಗೆ ಕರೆದೊಯ್ದೆವು. ಆದರೆ ಎಲ್ಲಿಯೂ ಸೇರಿಸಲಿಲ್ಲ. ವೆಂಟಿಲೇಟರ್ ಇಲ್ಲ ಎಂದು ಹೇಳಿ ರೋಗಿಯನ್ನು ದಾಖಲಿಸಿಕೊಳ್ಳದೆ ವಾಪಸ್ ಕಳುಹಿಸಿದರು. ಎಲ್ಲಾ ಕಡೆ ವೆಂಟಿಲೇಟರ್ ಹಾಗೂ ಬೆಡ್ ಇಲ್ಲ ಎಂದು ಹೇಳಿ ವಾಪಸ್ ಕಳುಹಿಸಿದ್ದಾರೆ. ಮಧ್ಯಾಹ್ನದವರೆಗೂ ಅಲೆದರೂ ಚಿಕಿತ್ಸೆ ಸಿಕ್ಕಿಲ್ಲ' ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಪಟ್ಟಣದ ವಾರ್ಡ್-14ರ ನಿವಾಸಿ, 47 ವರ್ಷದ ಲಾರಿ ಚಾಲಕರೊಬ್ಬರು ವೆಂಟಿಲೇಟರ್ ಸಿಗದೆ ಮೃತಪಟ್ಟಿದ್ದರು.